ನವದೆಹಲಿ:ನೂತನ ಉಪರಾಷ್ಟ್ರಪತಿಯ ಆಯ್ಕೆಗೆ ಶನಿವಾರ ಚುನಾವಣೆ ನಡೆಯಲಿದ್ದು, ಸಂಸತ್ತಿನಲ್ಲಿ ಇರುವ ಸಂಖ್ಯಾಬಲವನ್ನು ನೋಡಿದರೆ ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ಗೆಲ್ಲುವ ಸಾಧ್ಯತೆ ಅಧಿಕವಾಗಿದೆ.
ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಅವರು ಕಣಕ್ಕೆ ಇಳಿದಿದ್ದು, ಬಹುತೇಕ ಪ್ರತಿಪಕ್ಷಗಳು ಇವರಿಗೆ ಬೆಂಬಲ ಸೂಚಿಸಿವೆ. ಟಿಆರ್ಎಸ್ ಕೂಡ ಅವರನ್ನು ಬೆಂಬಲಿಸುವುದಾಗಿ ಶನಿವಾರ ಘೋಷಿಸಿದೆ. ಟಿಆರ್ಎಸ್ ಸಂಸದೀಯ ಪಕ್ಷದ ನಾಯಕ ಡಾ. ಕೆ.ಕೇಶವ ರಾವ್ ಅವರು ಪ್ರಕಟಣೆಯಲ್ಲಿ ಈ ವಿಷಯತಿಳಿಸಿದ್ದಾರೆ.
ಲೋಕಸಭೆಯ 543 ಹಾಗೂ ರಾಜ್ಯಸಭೆಯ 237 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ರಾಜ್ಯಸಭೆಯಲ್ಲಿ ಎಂಟು ಸ್ಥಾನಗಳು ಖಾಲಿ ಇವೆ. ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಇದಾದ ಬಳಿಕ ಮತಗಳ ಎಣಿಕೆ ನಡೆಯಲಿದೆ.
ಪಕ್ಷಗಳ ಸಂಖ್ಯಾಬಲ ಆಧರಿಸಿ ಹೇಳುವುದಾದರೆ ಧನಕರ್ ಅವರು 518 ರಿಂದ 539 ಮತಗಳನ್ನು ಹಾಗೂ ಆಳ್ವ ಅವರು 189 ಮತಗಳನ್ನು ಪಡೆಯುವ ಸಾಧ್ಯತೆ ಇದೆ. ತೃಣಮೂಲ ಕಾಂಗ್ರೆಸ್ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಎನ್ಡಿಎ ಮೈತ್ರಿಕೂಟದಲ್ಲಿ ಇರುವ ಪಕ್ಷಗಳು ಅಷ್ಟೇ ಅಲ್ಲದೆ ಬಿಜೆಡಿ, ಬಿಎಸ್ಪಿ, ವೈಎಸ್ಆರ್ ಕಾಂಗ್ರೆಸ್, ಟಿಡಿಪಿ ಮೊದಲಾದ ಪಕ್ಷಗಳು ಧನಕರ್ ಅವರಿಗೆ ಬೆಂಬಲ ಸೂಚಿಸಿವೆ.
ಯುಪಿಎ ಮೈತ್ರಿಕೂಟದಲ್ಲಿ ಇಲ್ಲದೆ ಇರುವ ಎಎಪಿ ಕೂಡ ವಿರೋಧ ಪಕ್ಷಗಳ ಅಭ್ಯರ್ಥಿಯಾದ ಆಳ್ವ ಅವರಿಗೆ ಬೆಂಬಲ ಸೂಚಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದ ಜೆಎಂಎಂ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಳ್ವ ಅವರನ್ನು ಬೆಂಬಲಿಸುವುದಾಗಿ ಹೇಳಿದೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾದವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಅಧಿಕಾರ ಅವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.