ADVERTISEMENT

ಚೀನಾದ 263 ಪ್ರಜೆಗಳಿಗೆ ವೀಸಾ ನೀಡಲು ಲಂಚ ಪ್ರಕರಣ: ಕಾರ್ತಿ ಆಪ್ತನಿಗೆ ನೋಟಿಸ್

ಪಿಟಿಐ
Published 12 ಜುಲೈ 2022, 10:54 IST
Last Updated 12 ಜುಲೈ 2022, 10:54 IST
   

ನವದೆಹಲಿ: ಚೀನಾದ 263 ಪ್ರಜೆಗಳಿಗೆ ವೀಸಾ ಮಂಜೂರಾತಿಗೆ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಮಂಗಳವಾರ ಮಾಜಿ ಸಂಸದ ಕಾರ್ತಿ ಚಿದಂಬರಂ ಅವರ ಆಪ್ತ, ಲೆಕ್ಕಪರಿಶೋಧಕ ಎಸ್‌.ಭಾಸ್ಕರರಾಮನ್‌ ಅವರಿಗೆ ನೋಟಿಸ್‌ ನೀಡಿದೆ.

ಕೆಳಹಂತದ ಕೋರ್ಟ್ ಭಾಸ್ಕರರಾಮನ್‌ ಅವರಿಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈಗ ನೋಟಿಸ್‌ ಜಾರಿ ಮಾಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ನಿಗದಿಪಡಿಸಿದೆ.

ತನಿಖಾ ಸಂಸ್ಥೆಯು ಭಾಸ್ಕರರಾಮನ್‌ ಅವರನ್ನು ಮೇ 18ರಂದು ಬಂಧಿಸಿದ್ದು, ವಿಚಾರಣಾ ನ್ಯಾಯಾಲಯ ಜೂನ್‌ 9ರಂದು ಜಾಮೀನು ನೀಡಿತ್ತು. ಉಲ್ಲೇಖಿತ ಪ್ರಕರಣ 2011ರಲ್ಲಿ ನಡೆದಿದ್ದು, ಆಗ ಕಾರ್ತಿ ಅವರ ತಂದೆ ಪಿ.ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.