ನವದೆಹಲಿ: ‘ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ನಿಬಂಧನೆಗಳ ಹೊರತಾಗಿಯೂ ಅಪರಾಧದ ತನಿಖೆಯ ಉದ್ದೇಶಕ್ಕಾಗಿ ವ್ಯಕ್ತಿಯೊಬ್ಬನ ಧ್ವನಿಯ ಮಾದರಿ ನೀಡಲು ಆದೇಶಿಸುವ ಅಧಿಕಾರವು ಮ್ಯಾಜಿಸ್ಟ್ರೇಟ್ಗೆ ಇದೆ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ರಿತೇಶ್ ಸಿನ್ಹಾ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರದ ನಡುವಣ ಪ್ರಕರಣವನ್ನು ಉಲ್ಲೇಖಿಸಿದೆ.
ಸಿಆರ್ಪಿಸಿಯಲ್ಲಿ ಸ್ಪಷ್ಟವಾದ ನಿಬಂಧನೆಗಳನ್ನು ಅಳವಡಿಸುವವರೆಗೂ ಮ್ಯಾಜಿಸ್ಟ್ರೇಟ್ಗೆ ಅಧಿಕಾರ ನೀಡಲಾಗುವುದು. ಈ ವಿಷಯವು ಸರ್ಕಾರದ ಮಟ್ಟದಲ್ಲೂ ಬಾಕಿ ಉಳಿದಿತ್ತು. ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್ಎಸ್ಎಸ್) ಅನುಷ್ಠಾನದೊಂದಿಗೆ ಇದನ್ನು ನಿರ್ದಿಷ್ಟವಾಗಿ ಸೆಕ್ಷನ್ 349ರಡಿ ಅಳವಡಿಸಲಾಗಿದೆ ಎಂದು ಆ ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿರುವುದನ್ನು ಪೀಠವು ಎತ್ತಿ ತೋರಿಸಿದೆ.
ಕ್ರಿಮಿನಲ್ ಮೊಕದ್ದಮೆಯೊಂದರಲ್ಲಿ ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಧ್ವನಿ ಮಾದರಿ ನೀಡುವಂತೆ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದರು. ಇದನ್ನು ಕಲ್ಕತ್ತ ಹೈಕೋರ್ಟ್ ರದ್ದುಪಡಿಸಿತ್ತು. ಇದರ ವಿರುದ್ಧ ರಾಹುಲ್ ಅಗರ್ವಾಲ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.