ADVERTISEMENT

ತಿಹಾರ್‌ ಜೈಲಲ್ಲಿ ಗಣ್ಯ ಕೈದಿಗಳ ನಿಗಾ ಸವಾಲು: ದೆಹಲಿಯ ಮಾಜಿ ಪೊಲೀಸ್ ಆಯುಕ್ತ

ಪಿಟಿಐ
Published 6 ಏಪ್ರಿಲ್ 2024, 14:51 IST
Last Updated 6 ಏಪ್ರಿಲ್ 2024, 14:51 IST
ನೀರಜ್‌ ಕುಮಾರ್‌ 
ನೀರಜ್‌ ಕುಮಾರ್‌    

ನವದೆಹಲಿ: ತಿಹಾರ್‌ ಜೈಲಿನಲ್ಲಿ ಗಣ್ಯ (ವಿವಿಐಪಿ) ಕೈದಿಗಳಿಗೆ ಯಾವಾಗಲೂ ದಾಳಿಗೊಳಗಾಗುವ ಬೆದರಿಕೆ ಇರುತ್ತದೆ. ಹೀಗಾಗಿ ಅವರನ್ನು ಜೈಲಿನಲ್ಲಿ ಹೆಚ್ಚು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ ಎಂದು ದೆಹಲಿಯ ಮಾಜಿ ಪೊಲೀಸ್‌ ಆಯುಕ್ತ ಹಾಗೂ ಡಿಜಿ ಆಗಿ ಸೇವೆ ಸಲ್ಲಿಸಿರುವ ನೀರಜ್‌ ಕುಮಾರ್‌ ಹೇಳಿದ್ದಾರೆ. 

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಅವರ ಸಂಪುಟದಲ್ಲಿ ಸಚಿವರಾಗಿರುವ ಸತ್ಯೇಂದ್ರ ಜೈನ್‌ ಮತ್ತು ಮನೀಷ್ ಸಿಸೋಡಿಯಾ ಅವರನ್ನು ತಿಹಾರ್‌ ಜೈಲಿನಲ್ಲಿ ಇರಿಸಲಾಗಿದೆ.  

ಶನಿವಾರ ದೆಹಲಿಯ ‍ಪಿಟಿಐ ಕಚೇರಿಯಲ್ಲಿ ಸಂಪಾದಕರೊಂದಿಗೆ ಸಂವಾದ ನಡೆಸಿದ ನೀರಜ್‌ ಕುಮಾರ್‌, ‘ಗಣ್ಯರನ್ನು ಜೈಲಿನಲ್ಲಿರಿಸಿದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅದೃಷ್ಟವಶಾತ್‌ ಅಥವಾ ದುರರದೃಷ್ಟವಶಾತ್‌ ಅರವಿಂದ ಕೇಜ್ರಿವಾಲ್‌ ಈಗ ಜೈಲಿನಲ್ಲಿದ್ದಾರೆ. ಅವರನ್ನು ಸಾಮಾನ್ಯವಾಗಿ ಯಾವುದೇ ಜೈಲು ಕೊಠಡಿ ಅಥವಾ ಬ್ಯಾರಕ್‌ನಲ್ಲಿ ಇರಿಸಲು ಸಾಧ್ಯವಿಲ್ಲ. ಭದ್ರತಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಸ್ಥಳದಲ್ಲಿ ಇರಿಸಲಾಗುತ್ತದೆ. ಇಲ್ಲದಿದ್ದರೆ ಅವರಿಗೆ ಬೆದರಿಕೆ ಒಡ್ಡುವ (ಬ್ಲೇಡ್‌ಬಾಜಿ) ಪ್ರಸಂಗಗಳು ನಡೆಯಬಹುದು. ಎಚ್ಚರಿಕೆ ವಹಿಸದಿದ್ದರೆ ಅವರ ಮೇಲೆ ದಾಳಿಯೂ ನಡೆಯಬಹುದು. 

ADVERTISEMENT

ಕೇಜ್ರಿವಾಲ್ ಅವರನ್ನು ಅಪರಾಧಿಗಳ ಜೈಲಿನಲ್ಲಿ ಇರಿಸಲಾಗಿದೆ. ವಿಚಾರಣೆಗೆ ಒಳಪಡುವವರನ್ನು ಇರಿಸುವುದಕ್ಕಿಂತ ಹೆಚ್ಚು ಸುರಕ್ಷಿತ ಮತ್ತು ಶಾಂತ ಸ್ಥಳದಲ್ಲಿ ಅವರನ್ನು ಇರಿಸಲಾಗಿದೆ ಎಂದರು. 

‘ನನ್ನ ಅಧಿಕಾರಾವಧಿಯಲ್ಲಿ ಜೈಲಿನಲ್ಲಿದ್ದ ಗರಿಷ್ಠ ಸಂಖ್ಯೆಯ ಗಣ್ಯರಿಗೆ ಭದ್ರತೆ ಒದಗಿಸಿದ್ದೆ. ಅದು ಕಾಮನ್‌ವೆಲ್ತ್‌ ಗೇಮ್ಸ್‌ ಹಗರಣ ನಡೆದ ಸಮಯ. ಸುರೇಶ್‌ ಕಲ್ಮಾಡಿ, ಕನಿಮೋಳಿ, ಎ. ರಾಜಾ (2ಜಿ ಹಗರಣ), ರಿಲಯನ್ಸ್‌, ಸಿಡಬ್ಲ್ಯುಜಿ ಸಂಸ್ಥೆಯ ಜನರು, ಅಮರ್‌ ಸಿಂಗ್‌, ಒಮರ್‌ ಗಾಂಧಿ, ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ಜೈಲಿನಲ್ಲಿರಿಸಲಾಗಿತ್ತು. ಇವರೆಲ್ಲ ಜೈಲಿನಲ್ಲಿ ಹೆಚ್ಚು ಉಪದ್ರವ ನೀಡುತ್ತಿದ್ದರು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.