ಕೋಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಇಂದು ತಮ್ಮ ವರ್ಚುವಲ್ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಅಲವತ್ತುಕೊಂಡಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
‘ನಾನು ಪ್ರಶಾಂತವಾಗಿ ಜೀವನ ನಡೆಸಲು ಬಯಸುತ್ತಿದ್ದೇನೆ. ನನ್ನ ಜೀವನ ನಡೆಸಲು ನನಗೆ ಅವಕಾಶ ಕೊಡಿ. ಯಾವುದೇ ಷರತ್ತು ಇದ್ದರೂ ಪರವಾಗಿಲ್ಲ. ಜಾಮೀನು ನೀಡಿ’ಎಂದು ಚಟರ್ಜಿ ಮನವಿ ಮಾಡಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಇವರಿಬ್ಬರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
‘ಸಾರ್ವಜನಿಕ ವಲಯದಲ್ಲಿ ನನ್ನ ಘನತೆ ಬಗ್ಗೆ ಅತ್ಯಂತ ಚಿಂತಿತನಾಗಿದ್ದೇನೆ. ನಾನೊಬ್ಬ ಎಕನಾಮಿಕ್ಸ್ ವಿದ್ಯಾರ್ಥಿ, ಸಚಿವನಾಗುವುದಕ್ಕೂ ಮುನ್ನ ವಿಪಕ್ಷ ನಾಯಕನಾಗಿದ್ದೆ’ ಎಂದು ಚಟರ್ಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
‘ನಾನು ರಾಜಕೀಯ ಬಲಿಪಶು, ಇ.ಡಿ ಅಧಿಕಾರಿಗಳನ್ನು ನನ್ನ ಮನೆ ಮತ್ತು ವಿಧಾನಸಭಾ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಲು ಹೇಳಿ. ಬ್ರಿಟಿಷ್ ವಿದ್ಯಾರ್ಥಿವೇತನ ಪಡೆದು ಎಲ್ಎಲ್ಬಿ ಓದಿದ್ದೇನೆ. ನನ್ನ ಮಗಳು ಬ್ರಿಟನ್ನಲ್ಲಿ ವಾಸವಿದ್ದಾಳೆ. ಅಂತಹ ಹಗರಣಗಳಲ್ಲಿ ನಾನು ಹೇಗೆ ಭಾಗಿಯಾಗಲು ಸಾಧ್ಯ? ನನಗೆ ಮೊದಲು ವೈದ್ಯಕೀಯ ಚಿಕಿತ್ಸೆ ಕೊಡಿಸಿ’ಎಂದು ಅವರು ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಪಾರ್ಥ ಚಟರ್ಜಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನನ್ನ ಕಕ್ಷಿದಾರ ತನಿಖಾಧಿಕಾರಿಗಳ ಜೊತೆ ಸಹಕರಿಸುತ್ತಿದ್ದಾರೆ. ಭವಿಷ್ಯದಲ್ಲೂ ಅವರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ಹಾಗಾಗಿ, ಜಾಮೀನು ನೀಡುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸ್ವಲ್ಪ ಸಮಯದ ಬಳಿಕ ಅರ್ಪಿತಾ ಚಟರ್ಜಿಯವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಮನೆಯಲ್ಲಿ ಹಣ ಹೇಗೆ ಬಂದಿತೋ ನನಗೆ ಗೊತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.