
ಲಂಡನ್ : ಭಾರತೀಯ ಲೇಖಕಿ ಕಿರಣ್ ದೇಸಾಯಿ ಅವರ ‘ದಿ ಲೋನ್ಲಿನೆಸ್ ಆಫ್ ಸೋನಿಯಾ ಆ್ಯಂಡ್ ಸನ್ನಿ’ ಪುಸ್ತಕವು ಬೂಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದು, ತಾವು ಅನುಭವಿಸಿದ ‘ಕಲಾತ್ಮಕ ಒಂಟಿತನ’ವನ್ನೇ (ಬೇಗುದಿ) ಆಧರಿಸಿ ಈ ಪುಸ್ತಕ ಬರೆದಿರುವುದಾಗಿ ಕಿರಣ್ ಹೇಳಿಕೊಂಡಿದ್ದಾರೆ.
ಲಂಡನ್ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಪೂರ್ವ ಸಮಾರಂಭದಲ್ಲಿ ತಮ್ಮ ಪುಸ್ತಕದ ವಸ್ತುವಿಷಯದ ಕುರಿತು ಕಿರಣ್ ಮಾತನಾಡಿದರು. ‘ದೀರ್ಘಕಾಲದಿಂದ ಬಗೆಹರಿಯದ ಪ್ರೇಮ ಕಥೆಯೊಂದರ ಮೂಲಕ ಜಗತ್ತಿನ ಒಂಟಿತನದ ವಿಚಾರದ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.
ಅಲ್ಲದೇ, ‘ವಿದ್ಯಾಭ್ಯಾಸಕ್ಕಾಗಿ ಮೊದಲ ಬಾರಿ ಭಾರತವನ್ನು ತೊರೆದಾಗ ಅನುಭವಿಸಿದ ಒಂಟಿತನ ಹಾಗೂ ಬರೆಯಲು ಆರಂಭಿಸಿದ ನಂತರ ಪ್ರೇಕ್ಷರಿಗೆ ತಲುಪಲು ಸಾಧ್ಯವಾಗದೆ, ಯಾರೂ ನಮ್ಮನ್ನು ಗುರುತಿಸದೇ ಎದುರಾದ ಬೇಗುದಿಯ ಅನುಭವಗಳನ್ನೇ ಈ ಪುಸ್ತಕವಾಗಿಸಿದ್ದೇನೆ. ಇದನ್ನು ನಾನು ಕಲಾತ್ಮಕ ಒಂಟಿತನದ ಬರಹವೆಂದೇ ಭಾವಿಸುವೆ’ ಎಂದಿದ್ದಾರೆ.
2006ರಲ್ಲಿ ಕಿರಣ್ ಅವರ ‘ದಿ ಇನ್ಹೆರಿಟೆನ್ಸ್ ಆಫ್ ಲಾಸ್’ ಎಂಬ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿತ್ತು. ಇದೀಗ ಎರಡನೇ ಬಾರಿಗೆ ಬೂಕರ್ ಪ್ರಶಸ್ತಿಯ ಸ್ವರ್ಧೆಯ ಅಂತಿಮ ಸುತ್ತಿಗೆ ಅವರ ಮತ್ತೊಂದು ಪುಸ್ತಕ ತಲುಪಿದೆ. ಪ್ರಶಸ್ತಿ ಗೆದ್ದರೆ, ಈ ರೀತಿ ಎರಡು ಬಾರಿ ಬೂಕರ್ ಪಡೆದ ಐದನೇ ಲೇಖಕರ ಸಾಲಿಗೂ ಕಿರಣ್ ಸೇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.