ADVERTISEMENT

ನಮ್ಮನ್ನು ಕ್ಷಮಿಸಿ; ಕದ್ದ ವಸ್ತುವನ್ನು ಕ್ಷಮಾಪಣೆ ಪತ್ರದೊಂದಿಗೆ ಮರಳಿಸಿದ ಕಳ್ಳರು

ಸಂಜಯ ಪಾಂಡೆ
Published 24 ಡಿಸೆಂಬರ್ 2021, 13:59 IST
Last Updated 24 ಡಿಸೆಂಬರ್ 2021, 13:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ಕದ್ದ ವಸ್ತುಗಳನ್ನು ಕಳ್ಳರು ಕ್ಷಮಾಪಣೆ ಪತ್ರದೊಂದಿಗೆ ಮರಳಿಸಿರುವ ಕುತೂಹಲಕಾರಿ ಘಟನೆ ವರದಿಯಾಗಿದೆ.

ದಿನೇಶ್ ತಿವಾರಿ ಎಂಬವರ ವೆಲ್ಡಿಂಗ್ ಅಂಗಡಿಯಿಂದ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದರು. ಆದರೆ ಅಂಗಡಿ ಮಾಲೀಕ ಶ್ರೀಮಂತರಲ್ಲ ಎಂದು ತಿಳಿದ ಚೋರರು, ಕದ್ದ ವಸ್ತುಗಳನ್ನೆಲ್ಲ ಹಿಂತಿರುಗಿಸಿದ್ದಾರೆ.

ಏನಿದು ಘಟನೆ?
ಚಂದ್ರಯಾಕ್ ಗ್ರಾಮದ ನಿವಾಸಿ ದಿನೇಶ್ ತಿವಾರಿ ಸಾಲ ಮಾಡಿಕೊಂಡು ವೆಲ್ಡಿಂಗ್ ಅಂಗಡಿ ತೆರೆದಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಅಂಗಡಿಗೆ ಭೇಟಿ ನೀಡಿದಾಗ ವೆಲ್ಡಿಂಗ್ ಮೆಶಿನ್ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿದ್ದರು.

ADVERTISEMENT

ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನಆಗಿರಲಿಲ್ಲ. ಆದರೆ ಗುರುವಾರ ಬೆಳಿಗ್ಗೆ ಅಂಗಡಿಯ ಬಳಿ ಬಂದು ನೋಡಿದಾಗ ಅಚ್ಚರಿ ಕಾದಿತ್ತು. ಕಳುವಾದ ಎಲ್ಲ ವಸ್ತುಗಳ ಜೊತೆಗೆ ಕ್ಷಮಾಪಣೆ ಪತ್ರವನ್ನು ಇರಿಸಲಾಗಿತ್ತು.

'ನಿಮ್ಮ ಅಂಗಡಿಯ ಬಗ್ಗೆ ನಮಗೆ ತಪ್ಪಾದ ಮಾಹಿತಿ ದೊರಕಿದೆ. ಮಾಲೀಕರು ಶ್ರೀಮಂತರಾಗಿದ್ದು, ಅಲ್ಲಿ ಅನೇಕ ಬೆಲೆಬಾಳುವ ವಸ್ತುಗಳು ಸಿಗಲಿವೆ ಎಂಬ ಮಾಹಿತಿ ಲಭಿಸಿದ್ದರಿಂದ ಅಂಗಡಿಗೆ ನುಗ್ಗಿದ್ದೆವು. ನಮ್ಮನ್ನು ಕ್ಷಮಿಸಿ' ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಳ್ಳರ ಈ ನಡೆಯಿಂದ ಎಲ್ಲರೂ ಆಶ್ಚರ್ಯ ಚಕಿತಗೊಂಡಿದ್ದಾರೆ. ಇಂತಹ ಪ್ರಸಂಗಗಳು ಸಾಮಾನ್ಯವಾಗಿ ನಡೆಯುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.