ADVERTISEMENT

'ಸಹೋದರರನ್ನು ರಕ್ಷಿಸಿದ್ದಕ್ಕೆ ನಮಗೆ ಹಣ ಬೇಡ ಸರ್': ಕೇರಳ ಸಿಎಂಗೆ ಮೀನುಗಾರನ ಮನವಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2018, 11:25 IST
Last Updated 20 ಆಗಸ್ಟ್ 2018, 11:25 IST
   

ಕೊಚ್ಚಿ: ಪ್ರವಾಹದಲ್ಲಿ ಸಿಲುಕಿದ ಸಾವಿರಾರು ಮಂದಿಯನ್ನು ರಕ್ಷಿಸಿದ ಕೇರಳದ ಮೀನುಗಾರರಿಗೆ ₹3000 ಮತ್ತು ರಕ್ಷಣಾ ಕಾರ್ಯದ ವೇಳೆ ಅವರ ದೋಣಿ ಹಾಳಾಗಿದ್ದರೆ ಹೊಸ ದೋಣಿ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ಆದರೆ ನಮ್ಮ ಸಹೋದರರನ್ನು ರಕ್ಷಿಸಿದ್ದಕ್ಕೆ ನಮಗೆ ಹಣ ಬೇಡ ಸರ್ ಎಂದು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಮೀನುಗಾರರೊಬ್ಬರು ಹೇಳುತ್ತಿರುವವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕೇರಳದ ಜಲಪ್ರಳಯದಲ್ಲಿ ಸಿಲುಕಿದ ಹಲವಾರು ಮಂದಿಯನ್ನು ರಕ್ಷಿಸಿದ್ದು ಮೀನುಗಾರರು.ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯ, ಮೀನುಗಾರರು ನಮ್ಮ ರಾಜ್ಯದ ಯೋಧರು ಎಂದು ಹೇಳಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ₹3000 ನೀಡುವುದಾಗಿ ಹೇಳಿದ್ದರು.

ಪಿಣರಾಯಿ ಅವರ ಈ ಮಾತಿಗೆ ಫೋರ್ಟ್ ಕೊಚ್ಚಿ ನಿವಾಸಿಯಾದ ಖಾಯಿಸ್ ಮೊಹಮ್ಮದ್ ಎಂಬವರು ಫೇಸ್‍ಬುಕ್ ವಿಡಿಯೊ ಮೂಲಕ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಖಾಯಿಸ್ ಹೇಳಿದ್ದೇನು?

ನಾನೊಬ್ಬ ಬೆಸ್ತನ ಮಗ. ನನ್ನ ಅಪ್ಪ ಬಂದರಿನಲ್ಲಿ ಕೆಲಸ ಮಾಡುತ್ತಿದ್ದರು.ಆ ಹಣದಿಂದ ನಾನು ನನ್ನ ಕುಟುಂಬ ಬದುಕುತ್ತಿದ್ದದ್ದು. ನಿನ್ನೆ ನಾನು ನನ್ನ ಸ್ನೇಹಿತರೊಂದಿಗೆ ರಕ್ಷಣಾ ಕಾರ್ಯಕ್ಕೆ ಹೋಗಿದ್ದೆ. ಆ ಕಾರ್ಯದಲ್ಲಿ ಕೈ ಜೋಡಿಸಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಆದರೆ ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಮೀನುಗಾರರಿಗೆ ತಲಾ ₹3000 ನೀಡುತ್ತೇನೆ ಎಂದು ಸಿಎಂ ಹೇಳಿದ್ದಾರೆ . ನಾವು ನಮ್ಮ ಸಹೋದರರನ್ನು ರಕ್ಷಿಸಿದ್ದೇವೆ. ಅವರನ್ನು ರಕ್ಷಿಸಿದ್ದಕ್ಕೆ ನಮಗೆ ದುಡ್ಡು ಬೇಡ.ಹಾಳಾದ ದೋಣಿಯನ್ನು ದುರಸ್ತಿ ಮಾಡಿಕೊಡುತ್ತೀರಿ ಎಂದು ಹೇಳಿರುವ ಮಾತನ್ನು ನಾನು ಒಪ್ಪುತ್ತೇನೆ ಎಂದು ಖಾಯಿಸ್ ಹೇಳಿದ್ದಾರೆ.

ಖಾಯಿಸ್ ಅವರ ಫೇಸ್ ಬುಕ್ ಪೋಸ್ಟ್ ಈವರೆಗೆ 35000ಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.