ADVERTISEMENT

‘ಮಮತಾ ಬ್ಯಾನರ್ಜಿ ಪರಾಕ್ರಮ ದಿನದಂದು ಭಾಷಣ ಮಾಡದೆ ದೇಶವನ್ನೇ ಅವಮಾನಿಸಿದ್ದಾರೆ’

ಏಜೆನ್ಸೀಸ್
Published 24 ಜನವರಿ 2021, 14:58 IST
Last Updated 24 ಜನವರಿ 2021, 14:58 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ    

ಹೈದರಾಬಾದ್: ಪರಾಕ್ರಮ ದಿನ ಕಾರ್ಯಕ್ರಮದ ವೇಳೆ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಷಣ ಮಾಡಲು ನಿರಾಕರಿಸಿದ್ದಾರೆ. ಆ ಮೂಲಕ ಇಡೀ ದೇಶವನ್ನೇ ಅವಮಾನಿಸಿದ್ದಾರೆ ಎಂದು ತೆಲಂಗಾಣ ಬಿಜೆಪಿ ಹಿರಿಯ ನಾಯಕ ಎನ್‌ವಿ ಸುಭಾಷ್‌ ಕಿಡಿ ಕಾರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ವಿಕ್ಟೋರಿಯಾ ಮೆಮೊರಿಯಲ್‌ ಸಭಾಂಗಣದಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ವೇಳೆ ಬ್ಯಾನರ್ಜಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ ಸಂದರ್ಭ ‘ಜೈ ಶ್ರೀರಾಮ್‌’ ಘೋಷಣೆಗಳನ್ನು ಕೂಗಲಾಗಿತ್ತು. ಅದನ್ನುದ್ದೇಶಿಸಿ ಆಕ್ರೋಶ ವ್ಯಕ್ತಪಡಿಸಿದ್ದ ಬಂಗಾಳ ಮುಖ್ಯಮಂತ್ರಿ, ‘ಸರ್ಕಾರಿ ಕಾರ್ಯಕ್ರಮವು ಒಂದಿಷ್ಟು ಘನತೆಯನ್ನು ಹೊಂದಿರಬೇಕು’ ಮತ್ತು ‘ನೀವು ಆಹ್ವಾನಿಸಿದ್ದವರನ್ನೇ ಅವಮಾನಿಸುವುದು ಉಚಿತವಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಸುಭಾಷ್‌,‘ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಭೀತಿಯಲ್ಲಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಪರಂಪರೆಯನ್ನು ಅವಮಾನಿಸುವುದನ್ನು ಕ್ಷಮಿಸಲಾಗದು ಮತ್ತು ಒಪ್ಪಲಾಗದು’ ಎಂದು ಹೇಳಿದ್ದಾರೆ.

ಮುಂದುವರಿದು,‘ಜನರು ಸಾರ್ವಜನಿಕವಾಗಿ ಗುಂಪುಗೂಡಿದಾಗ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಘೋಷಣೆಗಳನ್ನು ಕೂಗುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ನಾಯಕರು ಸಂಯಮವನ್ನು ಕಾಪಾಡಿಕೊಳ್ಳಬೇಕು. ನೇತಾಜಿಯವರ 125ನೇ ಜನ್ಮದಿನಾಚರಣೆ ವೇಳೆ ಅವರು (ಬ್ಯಾನರ್ಜಿ) ತಮ್ಮ ಭಾಷಣವನ್ನು ನಿರಾಕರಿಸಬಾರದಿತ್ತು. ಹಾಗೆ ಮಾಡುವ ಮೂಲಕ ಅವರು ದೇಶವನ್ನು ಅವಮಾನಿಸಿದ್ದಾರೆ’ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಜೀರ್ಣಿಸಿಕೊಳ್ಳಲಾಗದ ಬ್ಯಾನರ್ಜಿಯವರ ವರ್ತನೆಯು ಅವರ ಅವನತಿಯನ್ನು ಸೂಚಿಸುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.