ಇಂದೋರ್: ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಲ್ಲಿ ನಿಮ್ಮ ಗೋತ್ರ ಯಾವುದು?ಎಂದು ಕೇಳಿದ್ದಾರೆ.
ರಾಹುಲ್ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳ ವೋಟು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಮಧ್ಯಪ್ರದೇಶದ ದೇವಾಲಯಗಳಿಗೆ ರಾಹುಲ್ ನಿರಂತರವಾಗಿ ಭೇಟಿ ನೀಡುತ್ತಿರುವುದರ ಬಗ್ಗೆ ಬಿಜೆಪಿ ಈ ರೀತಿ ಹೇಳಿದೆ.
ರಾಹುಲ್ ಅವರು ಜನಿವಾರ ಧರಿಸಿದ್ದಾರೆ. ಅವರು ಯಾವ ರೀತಿಯ ಜನಿವಾರವನ್ನು ಧರಿಸುತ್ತಾರೆ, ಅವರ ಗೋತ್ರ ಯಾವುದು? ಎಂದು ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿವೆ.
ಅವರ ಅಜೆಂಡಾ ಏನು, ಉದ್ಯೋಗ ಸೃಷ್ಟಿಗೆ ಇರುವ ಯೋಜನೆಗಳು ಏನು? ಕೃಷಿ ಅಭಿವೃದ್ಧಿಗಾಗಿ ಅವರು ಏನು ಯೋಜನೆ ಮಾಡುತ್ತಿದ್ದಾರೆ? ಹಣದುಬ್ಬರ ನಿಯಂತ್ರಣಕ್ಕಾಗಿ ಯಾವ ಯೋಜನೆ ಇದೆ? ಇಂಥಾ ಪ್ರಶ್ನೆಗಳು ಕೇಳಿದ್ದರೆ ಅರ್ಥವಿರುತ್ತಿತ್ತು ಆದರೆ ಗೋತ್ರ ಯಾವುದು ಎಂದು ಕೇಳುವವರನ್ನು ದೇವರೇ ಕಾಪಾಡಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಸೋಮವಾರ ಉಜ್ಜೈನಿಯಲ್ಲಿರುವ ಮಹಾಕಾಲೇಶ್ವರ್ ದೇವಾಲಯಕ್ಕೆ ಭೇಟಿ ನೀಡಿದ್ದರು.
ಬಿಜೆಪಿಯ ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಬಿಜೆಪಿ ಧರ್ಮದ ಬಗ್ಗೆ ಮಾತ್ರ ಮಾತನಾಡುತ್ತದೆ, ಆದರೆ ಅಧಿಕಾರದಲ್ಲಿರುವ ಅವರ ಏಕೈಕ ಧರ್ಮ ಭ್ರಷ್ಟಾಚಾರ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.