ADVERTISEMENT

ಕೇರಳವೂ ಅಭಿವೃದ್ಧಿಯಾದಾಗಲೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ: ಜೆ.ಪಿ. ನಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2024, 3:14 IST
Last Updated 7 ಏಪ್ರಿಲ್ 2024, 3:14 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಕೋಯಿಕ್ಕೋಡ್: ಭಾರತದ ಸಮಗ್ರ ಪ್ರಗತಿಯಲ್ಲಿ ಕೇರಳ ಅಭಿವೃದ್ಧಿಯ ಪಾತ್ರವನ್ನು ಒತ್ತಿ ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಕೇರಳವೂ ಅಭಿವೃದ್ಧಿ ಆದ ನಂತರವೇ ಭಾರತದ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದಾರೆ.

‘ಮೋದಿ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೇರಳವೂ ಅಭಿವೃದ್ಧಿಯಾದ ಬಳಿಕವಷ್ಟೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ, ನಾವು ಅಭಿವೃದ್ಧಿ ಪ್ರಕ್ರಿಯೆಗೆ ಕೈಜೋಡಿಸಬೇಕು ಮತ್ತು ಪ್ರಧಾನಿ ಮೋದಿಯವರನ್ನು ಬೆಂಬಲಿಸಬೇಕು’ ಎಂದು ಕೇರಳದ ಕೋಯಿಕ್ಕೋಡ್ ಚುನಾವಣಾ ರ್‍ಯಾಲಿಯಲ್ಲಿ ನಡ್ಡಾ ಹೇಳಿದ್ದಾರೆ.

‘ಮೋದಿಯವರ 10 ವರ್ಷಗಳ ಆಡಳಿತದ ಸಾಧನೆಯನ್ನು ನಿಮ್ಮ ಮುಂದಿಡುವುದಾದರೆ, ಭಾರತವು ವಿಶ್ವದ 11ನೇ ಆರ್ಥಿಕತೆಯಿಂದ 5ನೇ ಆರ್ಥಿಕತೆಯ ಸ್ಥಾನಕ್ಕ ಬಂದಿದೆ ಎಂದರು.

ADVERTISEMENT

ಇದಕ್ಕೂ ಮೊದಲು, ಶನಿವಾರ ನವದೆಹಲಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ನಡ್ಡಾ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್, ನಡ್ಡಾ ಅವರಿಗೆ ಪ್ರತಿಜ್ಞಾವಿಧಿ ಭೋದಿಸಿದರು.

ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ.

ಲೋಕಸಭೆಯ 543 ಕ್ಷೇತ್ರಗಳಿಗೆ ಏಪ್ರಿಲ್ 19ರಿಂದ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಸುಮಾರು 96.8 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 19ರಲ್ಲಿ ಗೆಲುವು ಸಾಧಿಸಿತ್ತು. 15ರಲ್ಲಿ ಕಾಂಗ್ರೆಸ್, ಉಳಿದ ಕ್ಷೇತ್ರಗಳಲ್ಲಿ ಮಿತ್ರ ಪಕ್ಷಗಳು ಜಯ ಸಾಧಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.