ನವದೆಹಲಿ: ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿ ಸಾಲ ಪಡೆಯುವ ಕೇಂದ್ರದ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವ ವಿವಿಧ ರಾಜ್ಯ ಸರ್ಕಾರಗಳ ನಿಲುವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
‘ನಿಮ್ಮಗಳ ಭವಿಷ್ಯವನ್ನು ನಿಮ್ಮ ಮುಖ್ಯಮಂತ್ರಿಯು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏಕೆ ‘ಒತ್ತೆ’ ಇಡುತ್ತಿದ್ದಾರೆ?’ ಎಂದೂ ಅವರು ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿರುವ ರಾಜ್ಯಗಳ ಜನತೆಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಜಿಎಸ್ಟಿಗೆ ಸಂಬಂಧಿಸಿದಂತೆ ಐದು ಅಂಶಗಳನ್ನು ಉಲ್ಲೇಖಿಸಿ, ಜನರಿಗೆ ಮೇಲಿನಂತೆ ಪ್ರಶ್ನೆ ಮಾಡಿದ್ದಾರೆ.
1. ಜಿಎಸ್ಟಿ ಆದಾಯ ಕೊಡಲಾಗುವುದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಭರವಸೆ ನೀಡಿತ್ತು.
2. ಪ್ರಧಾನಿ ಮತ್ತು ಕೋವಿಡ್ನಿಂದಾಗಿ ಆರ್ಥಿಕತೆ ಅಸ್ತವ್ಯಸ್ತಗೊಂಡಿತು.
3. ಪ್ರಧಾನಿಯಿಂದ ಕಾರ್ಪೊರೇಟ್ ಕಂಪನಿಗಳಿಗೆ ₹ 1.4 ಲಕ್ಷ ಕೋಟಿ ತೆರಿಗೆ ಕಡಿತದ ನೆರವು ಮತ್ತು ತಮಗಾಗಿ ₹ 8,400 ಕೋಟಿ ವೆಚ್ಚದಲ್ಲಿ ಎರಡು ವಿಮಾನಗಳ ಖರೀದಿ.
4) ರಾಜ್ಯಗಳಿಗೆ ಕೊಡಲು ಕೇಂದ್ರದ ಬಳಿ ಹಣವಿಲ್ಲ.
5) ಸಾಲ ಪಡೆಯಲು ರಾಜ್ಯಗಳಿಗೆ ಹಣಕಾಸು ಸಚಿವರ ಸಲಹೆ‘ ಎಂಬ ಅಂಶಗಳನ್ನು ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಜಿಎಸ್ಟಿ ಪರಿಹಾರ ಕುರಿತಂತೆ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು, ಬಹುತೇಕ ಬಿಜೆಪಿ ಆಡಳಿತವಿರುವ ಸುಮಾರು 21 ರಾಜ್ಯಗಳು ಬೆಂಬಲಿಸಿದ್ದು, ಪರಿಹಾರದ ಕೊರತೆ ನೀಗಿಕೊಳ್ಳಲು ₹ 1.10 ಲಕ್ಷ ಕೋಟಿ ಸಾಲ ಪಡೆಯಲು ಮುಂದಾಗಿವೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಪರಿಹಾರ ಕೊರತೆಯನ್ನು ಭರಿಸುವ ಕ್ರಮವಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ₹ 20,000 ಕೋಟಿ ಬಿಡುಗಡೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.