ಮುಂಬೈ: ಡಿಸೆಂಬರ್ 2017ರಲ್ಲಿ ಅರುಣಾಚಲ ಪ್ರದೇಶದ ಗಡಿಭಾಗ ತವಾಂಗ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಪ್ರಸಾದ್ ಮಹದಿಕ್ ಅವರ ಪತ್ನಿ ಗೌರಿ ಮಹದಿಕ್ ಭಾರತೀಯ ಸೇನೆ ಸೇರಿದ್ದಾರೆ.
ಮುಂಬೈವಿರಾರ್ ನಿವಾಸಿಯಾದ ಗೌರಿಗೆ ಈಗ 32 ವರ್ಷ. ತನ್ನ ಪತಿಗೆ ಗೌರವ ಸಲ್ಲಿಸುವುದಕ್ಕಾಗಿ ತಾನು ಸೇನೆ ಸೇರಲು ನಿರ್ಧರಿಸಿದೆ ಅಂತಾರೆ ಗೌರಿ.
ಒಂದು ವರ್ಷ ಮಿಲಿಟರಿ ತರಬೇತಿಪಡೆದ ಗೌರಿ ಲೆಫ್ಟನೆಂಟ್ ಆಗಿ ಸೇನೆಗೆ ಸೇರಲಿದ್ದಾರೆ.ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್ಬಿ) ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ವಿಧವೆಯರ ಕೆಟಗರಿಯಲ್ಲಿ ಗೌರಿ ಟಾಪರ್ ಆಗಿದ್ದಾರೆ.
ಮಿಲಿಟರಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಗೌರವ ಮತ್ತು ಹೆಮ್ಮೆ ಇದೆ.ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನನ್ನ ಧೀರ ಪತಿಗೆ ನನ್ನ ಈ ಸಾಧನೆಯನ್ನು ಅರ್ಪಿಸುತ್ತಿದ್ದೇನೆ ಎಂದು ಗೌರಿ ಹೇಳಿದ್ದಾರೆ.
ನನ್ನ ಜೀವನದಲ್ಲಿ ಅದುಕಷ್ಟದ ದಿನಗಳಾಗಿದ್ದವು. ಆಗ ನಾನು ವಾಸ್ತವವನ್ನು ಸ್ವೀಕರಿಸಲು ಸಿದ್ಧಳಿರಲಿಲ್ಲ. ಕೆಲವು ತಿಂಗಳ ನಂತರ ನಾನು ಸೇನೆ ಸೇರಲು ನಿರ್ಧರಿಸಿದೆ.ಈ ಕನಸನ್ನು ನನಸು ಮಾಡಲು ನಾನು ಮಾನಸಿಕವಾಗಿ ತುಂಬಾ ಗಟ್ಟಿಯಾದೆ.
ಕಳೆದ ವರ್ಷವೂ ಎಸ್ಎಸ್ಬಿ ಪರೀಕ್ಷೆ ಬರೆದಿದ್ದರು ಗೌರಿ. ಕಳೆದ ವರ್ಷ ನನ್ನ ತಯಾರಿಸರಿಯಾಗಿರಲಿಲ್ಲ. ಆದರೆ ಈ ಬಾರಿ ಅದಕ್ಕೆ ಸರಿಯಾಗಿ ತಯಾರಿ ನಡೆಸಿದೆ.ಕಂಬೈನ್ಡ್ ಡಿಫೆನ್ಸ್ ಸರ್ವೀಸ್ (ಸಿಡಿಎಸ್) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನನ್ನ ಗೆಳೆಯರೂ ಸಹಾಯ ಮಾಡಿದರು. ನನ್ನ ಕುಟುಂಬದವರ ಸಹಾಯವೂ ಇತ್ತು. ಅವರಿಗೆಲ್ಲರಿಗೂ ನನ್ನ ಧನ್ಯವಾದಗಳು ಎಂದು ಗೌರಿ ಹೇಳಿದ್ದಾರೆ.
ಬಿಹಾರ್ ರೆಜಿಮೆಂಟ್ನ 7ನೇ ಬೆಟಾಲಿಯನ್ನಲ್ಲಿ ಮೇಜರ್ ಪ್ರಸಾದ್ ಸೇವೆ ಸಲ್ಲಿಸುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.