ADVERTISEMENT

ಪತ್ನಿಗೆ ಜೀವನಾಂಶ: ಕಾನೂನಿನ ಪ್ರಶ್ನೆ ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್‌

ಕೌಟುಂಬಿಕ ನ್ಯಾಯಾಲಯದ ಆದೇಶ ಪಾಲಿಸದಿದ್ದರೂ ಪತ್ನಿಗೆ ಜೀವನಾಂಶ ನೀಡಲು ಪತಿಗೆ ಸೂಚನೆ

ಪಿಟಿಐ
Published 11 ಜನವರಿ 2025, 16:01 IST
Last Updated 11 ಜನವರಿ 2025, 16:01 IST
supreme-court-
supreme-court-   

ನವದೆಹಲಿ: ಪತ್ನಿಯು ಪತಿಯ ಜೊತೆ ಬಾಳಬೇಕು ಎಂದು ಕೋರ್ಟ್‌ ನೀಡಿದ ಆದೇಶವನ್ನು ಪಾಲಿಸದೆ ಇದ್ದಾಗ, ಆತನ ಜೊತೆ ಬಾಳ್ವೆ ನಡೆಸುವುದಕ್ಕೆ ಒಲ್ಲೆ ಎನ್ನಲು ಆಕೆಗೆ ಸಕಾರಣಗಳು ಇದ್ದಾಗ, ಆಕೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಮದುವೆಯ ಸಂಬಂಧವನ್ನು ಪುನರ್‌ಸ್ಥಾಪಿಸುವ ಆದೇಶವನ್ನು ಪತಿಯು ಕೋರ್ಟ್‌ನಿಂದ ಪಡೆದುಕೊಂಡ ನಂತರದಲ್ಲಿಯೂ, ಪತಿಯು ಆತನ ಜೊತೆ ವಾಸ ಮಾಡಲು ನಿರಾಕರಿಸಿದರೆ, ಆಕೆಗೆ ಜೀವನಾಂಶ ಕೊಡಬೇಕಾಗುತ್ತದೆಯೇ ಎಂಬ ಕಾನೂನಿನ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇರುವ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ. ಈ ವಿಚಾರವಾಗಿ ಇಂಥದ್ದೇ ನಿಯಮ ಎಂಬುದು ಇಲ್ಲ, ಇದು ಪ್ರಕರಣವನ್ನು ಆಧರಿಸಿರುತ್ತದೆ ಎಂದು ಪೀಠವು ಹೇಳಿದೆ.

ಮದುವೆಯ ಸಂಬಂಧವನ್ನು ಪುನರ್‌ಸ್ಥಾಪಿಸುವ ಕೋರ್ಟ್‌ ಆದೇಶವನ್ನು ಪತ್ನಿಯು ಪಾಲಿಸಿಲ್ಲ ಎಂದಾದರೆ, ಅದೊಂದೇ ಕಾರಣಕ್ಕೆ ಆಕೆಗೆ ಜೀವನಾಂಶ ನಿರಾಕರಿಸಲು ಆಗುತ್ತದೆಯೇ ಎಂಬ ಪ್ರಶ್ನೆಗೆ ಹಲವು ಹೈಕೋರ್ಟ್‌ಗಳು ಉತ್ತರ ಒದಗಿಸಿವೆ. ಆದರೆ ಈ ವಿಚಾರದಲ್ಲಿ ನಿರ್ದಿಷ್ಟವಾದ ಅಭಿಪ್ರಾಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಪೀಠವು ಹೇಳಿದೆ.

ADVERTISEMENT

ಪ್ರಕರಣದ ಸತ್ಯಾಸತ್ಯತೆಯನ್ನು ಇದು ಆಧರಿಸಿರುತ್ತದೆ. ಕೋರ್ಟ್‌ ಆದೇಶದ ಹೊರತಾಗಿಯೂ, ಪತಿಯ ಜೊತೆ ಬಾಳ್ವೆ ನಡೆಸುವುದನ್ನು ನಿರಾಕರಿಸುವುದಕ್ಕೆ ಪತ್ನಿಗೆ ಸಾಕಷ್ಟು ಕಾರಣಗಳು ಇದ್ದವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ಪೀಠ ವಿವರಿಸಿದೆ.

ಪರಸ್ಪರ ಬೇರೆಯಾಗಿರುವ, ಜಾರ್ಖಂಡ್‌ನ ಪತಿ–ಪತ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈ ತೀರ್ಮಾನ ನೀಡಿದೆ. ಇವರು 2014ರ ಮೇ 1ರಂದು ಮದುವೆಯಾಗಿದ್ದರು. ಆದರೆ 2015ರ ಆಗಸ್ಟ್‌ನಲ್ಲಿ ಬೇರೆಯಾದರು. ದಂಪತಿ ಒಟ್ಟಾಗಿ ಬಾಳಬೇಕು ಎಂಬ ಆದೇಶ ನೀಡಬೇಕು ಎಂಬ ಕೋರಿಕೆಯೊಂದಿಗೆ ಪತಿಯು ರಾಂಚಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು.

ಪತಿಯು ತನಗೆ ಕಿರುಕುಳ ನೀಡುತ್ತಿದ್ದಾನೆ, ₹5 ಲಕ್ಷ ವರದಕ್ಷಿಣೆಗೆ ಪೀಡಿಸುತ್ತಿದ್ದಾನೆ ಎಂದು ಪತ್ನಿಯು ನ್ಯಾಯಾಲಯಕ್ಕೆ ತಿಳಿಸಿದ್ದಳು. ಪತಿಯು ಪತ್ನಿಯ ಜೊತೆ ವಾಸಿಸಲು ಬಯಸುತ್ತಿದ್ದಾನೆ ಎಂದು ಹೇಳಿದ್ದ ಕೌಟುಂಬಿಕ ನ್ಯಾಯಾಲಯವು, ಪರಸ್ಪರರು ಒಟ್ಟಿಗೆ ಬಾಳ್ವೆ ನಡೆಸಬೇಕು ಎಂದು 2022ರಲ್ಲಿ ಆದೇಶಿಸಿತ್ತು. ಆದರೆ ಈ ಆದೇಶವನ್ನು ಪತ್ನಿ ಪಾಲಿಸಲಿಲ್ಲ.

ಬದಲಿಗೆ ಆಕೆಯು, ತನಗೆ ಜೀವನಾಂಶ ಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಳು. ಪತ್ನಿಗೆ ತಿಂಗಳಿಗೆ ₹10 ಸಾವಿರ ಜೀವನಾಂಶ ನೀಡಬೇಕು ಎಂದು ನ್ಯಾಯಾಲಯವು ಪತಿಗೆ ಆದೇಶಿಸಿತು.

ನಂತರದಲ್ಲಿ ಪತಿಯು ಈ ಆದೇಶವನ್ನು ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ. ಕೌಟುಂಬಿಕ ನ್ಯಾಯಾಲಯದ ಆದೇಶವಿದ್ದರೂ ಪತಿಯು ತನ್ನ ಗಂಡನ ಮನೆಗೆ ಹೋಗಿಲ್ಲ ಎಂದು ಹೈಕೋರ್ಟ್‌ ಹೇಳಿತು. ಪತ್ನಿಗೆ ಜೀವನಾಂಶವನ್ನು ಕೊಡಬೇಕಿಲ್ಲ ಎಂದು ಅದು ಆದೇಶ ನೀಡಿತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಳು.

ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌, ಪತ್ನಿಯ ಮೇಲ್ಮನವಿಯನ್ನು ಮಾನ್ಯ ಮಾಡಿದೆ. ಪತಿಯ ಮನೆಯಲ್ಲಿ ಈಕೆಗೆ ಶೌಚಾಲಯ ಬಳಸಲು ಅವಕಾಶ ಕೊಡುತ್ತಿರಲಿಲ್ಲ, ಆಕೆಗೆ ಅಡುಗೆ ಮಾಡಲು ಸೂಕ್ತ ಸೌಲಭ್ಯ ಒದಗಿಸುತ್ತಿರಲಿಲ್ಲ, ಇವು ಆಕೆಯನ್ನು ಅಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬುದನ್ನು ಸೂಚಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬೇರೆಯಾಗಿರುವ ಪತ್ನಿಗೆ ತಿಂಗಳಿಗೆ ₹10 ಸಾವಿರ ಜೀವನಾಂಶ ಕೊಡಬೇಕು ಎಂದು ಪತಿಗೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.