ಪ್ರಾತಿನಿಧಿಕ ಚಿತ್ರ
ನವದೆಹಲಿ: ದೇಶದಲ್ಲಿ ವನ್ಯಜೀವಿ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, 2020 ರಿಂದ 2024ರ ಅವಧಿಯಲ್ಲಿ 2,700 ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.
ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ, ‘ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972ರ ಅಡಿಯಲ್ಲಿ, ವನ್ಯಜೀವಿಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆ ಸೇರಿದಂತೆ ಸಂರಕ್ಷಣೆಯ ಹೊಣೆ ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲಿದೆ ಎಂದರು.
ವನ್ಯಜೀವಿ ಅಪರಾಧ ಪ್ರಕರಣಗಳ ಕುರಿತು ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗವು (ಡಬ್ಲ್ಯುಸಿಸಿಬಿ) ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿ, ಸರ್ಕಾರದೊಂದಿಗೆ ಹಂಚಿಕೊಳ್ಳುತ್ತದೆ. ಅದರ ಪ್ರಕಾರ, 2020–24 ರಲ್ಲಿ 2,701 ವನ್ಯಜೀವಿ ಅಪರಾಧಗಳು ವರದಿಯಾಗಿವೆ. 2020ರಲ್ಲಿ 820, 2021 ರಲ್ಲಿ 632, 2022ರಲ್ಲಿ 546. 2023ರಲ್ಲಿ 349 ಮತ್ತು 2024ರಲ್ಲಿ 354 ಪ್ರಕರಣಗಳು ವರದಿಯಾಗಿದ್ದು, ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಅಂಕಿ ಅಂಶಗಳನ್ನು ತಿಳಿಸಿದರು.
2020–24ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು 349, ಉತ್ತರ ಪ್ರದೇಶದಲ್ಲಿ 297 ಹಾಗೂ ಹರಿಯಾಣದಲ್ಲಿ 243 ಅಪರಾಧಗಳು ವರದಿಯಾಗಿವೆ.
ಇನ್ನುಳಿದಂತೆ ತಮಿಳುನಾಡಿನಲ್ಲಿ 200, ಅಸ್ಸಾಂ 178, ಉತ್ತರಾಖಂಡ 15, ಆಂಧ್ರಪ್ರದೇಶ 153. ಮಧ್ಯಪ್ರದೇಶ 145, ಒಡಿಶಾ 145, ಕರ್ನಾಟಕ 84, ಮಹಾರಾಷ್ಟ್ರ 77, ಹಿಮಾಚಲ ಪ್ರದೇಶ 76, ಮೇಘಾಲಯ 71. ತೆಲಂಗಾಣ 51 ಹಾಗೂ ಪಂಜಾಬ್ನಲ್ಲಿ 49 ಪ್ರಕರಣಗಳು ವರದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.