ಜೈರಾಮ್ ರಮೇಶ್
–ಪಿಟಿಐ ಚಿತ್ರ
ನವದೆಹಲಿ: ‘ಜಾತಿ ಜನಗಣತಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಹತಾಶರಾಗಿ ಯು–ಟರ್ನ್’ ಹೊಡೆದಿದ್ದು, ಈ ವಿಚಾರದಲ್ಲಿ ಸರ್ಕಾರದ ನೀತಿಯು ಅಧಿಕೃತವಾಗಿ ಬದಲಾಗಿರುವುದು ಹೌದು ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ. ಸಮೀಕ್ಷೆ ನಡೆಸುವ ವಿಚಾರದಲ್ಲಿ ಕಾಲಮಿತಿ ನಿಗದಿಪಡಿಸುವ ಬದ್ಧತೆಯನ್ನು ಕೂಡ ತೋರಬೇಕು ಎಂದು ಒತ್ತಾಯಿಸಿದೆ.
‘ಜಾತಿ ಜನಗಣತಿ ವಿಚಾರದಲ್ಲಿ ಏಕಾಏಕಿ ಹತಾಶರಾಗಿ ಪ್ರಧಾನಿ ಯು–ಟರ್ನ್ ಹೊಡೆದಿದ್ದಾರೆ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘2024ರ ಏಪ್ರಿಲ್ 28ರಂದು ಟಿ.ವಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ‘ಜಾತಿ ಜನಗಣತಿ ಕುರಿತು ಬೇಡಿಕೆ ಇಡುತ್ತಿರುವವರೆಲ್ಲರೂ ‘ಅರ್ಬನ್ ನಕ್ಸಲರು’ ಎಂದು ಪ್ರಧಾನಿ ಮೋದಿ ಟೀಕಿಸಿದ್ದರು. 2021ರ ಜುಲೈ 20ರಂದು ಸಂಸತ್ತಿನಲ್ಲಿ ಲಿಖಿತವಾಗಿ ಉತ್ತರ ನೀಡಿದ್ದ ಕೇಂದ್ರ ಗೃಹ ಸಚಿವಾಲಯ, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೊರತಾಗಿ ಎಲ್ಲ ಸಮುದಾಯಗಳ ಜಾತಿ ಜನಗಣತಿ ಸರ್ಕಾರದ ನೀತಿಯ ಭಾಗವಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು’ ಎಂದಿದ್ದಾರೆ.
‘ಕಳೆದ 11 ವರ್ಷಗಳಲ್ಲಿ ಸತತವಾಗಿ ವಿರೋಧಿಸಿ, ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ತಿರಸ್ಕರಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರ, ಕೊನೆಗೂ ಬೇಡಿಕೆ ಈಡೇರಿಸಲು ಸಮ್ಮತಿ ನೀಡಿದೆ. ಮುಂದಿನ ಜನಗಣತಿ ವೇಳೆ ಜಾತಿ ಜನಗಣತಿಯನ್ನು ಸೇರ್ಪಡೆಗೊಳಿಸುವುದಾಗಿ ತಿಳಿಸಿದೆ. ಈ ವಿಷಯದಲ್ಲಿ ಸರ್ಕಾರದ ಉದ್ದೇಶ ಏನು ಎಂಬುದರ ಮಾಹಿತಿ ನೀಡಿಲ್ಲ. ಅಲ್ಲದೇ, ಹಣಕಾಸು ಹಂಚಿಕೆಯನ್ನು ಮಾಡಿಲ್ಲ’ ಎಂದು ರಮೇಶ್ ನೆನಪಿಸಿದ್ದಾರೆ.
ಮೀಸಲಾತಿಯಲ್ಲಿ ಈಗಿರುವ ಶೇಕಡಾ 50 ಮಿತಿಯನ್ನು ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದ್ದು, ಸಂವಿಧಾನದ ವಿಧಿ 15 (5) ಅನ್ನು ತುರ್ತಾಗಿ ಜಾರಿ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಒಬಿಸಿ, ದಲಿತ, ಆದಿವಾಸಿ ಸಮುದಾಯಗಳಿಗೂ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.