ಮುಂಬೈ: ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದು, ಪೊಲೀಸರು ತಾನು ನೀಡಿದ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಆರೋಪವನ್ನು ಎನ್ಸಿಪಿ ನಾಯಕ ತಿರಸ್ಕರಿಸಿದ್ದು, ದೂರು ನೀಡಿದ ಮಹಿಳೆ ಹಾಗೂ ಆಕೆಯ ಸಹೋದರಿ ಬ್ಲ್ಯಾಕ್ಮೇಲ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ‘ದೂರುದಾರರ ಸಹೋದರಿ ಜೊತೆ ನನಗೆ ಸಂಬಂಧವಿತ್ತು. ಇಬ್ಬರು ಮಕ್ಕಳೂ ಇದ್ದಾರೆ’ ಎಂದು ಧನಂಜಯ್ ಹೇಳಿದರು.
‘2006ರಿಂದ ನನ್ನ ಮೇಲೆ ನಿರಂತರವಾಗಿ ಧನಂಜಯ್ ಮುಂಡೆ ಅತ್ಯಾಚಾರವೆಸಗುತ್ತಿದ್ದಾರೆ. ಈ ಕುರಿತು ಓಶಿವಾರ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರು ಸ್ವೀಕರಿಸಲಿಲ್ಲ’ ಎಂದು 37 ವರ್ಷದ ಮಹಿಳೆ ಮುಂಬೈ ಪೊಲೀಸ್ ಆಯುಕ್ತರಿಗೆ ಜ.10ರಂದು ಪತ್ರ ಬರೆದಿದ್ದಾರೆ.
‘ದೂರು ನೀಡಿದ ಮಹಿಳೆಯ ಸಹೋದರಿಯ ಜೊತೆ ನನಗೆ ಸಂಬಂಧವಿದ್ದ ಕುರಿತು ನನ್ನ ಪತ್ನಿ, ಕುಟುಂಬ ಹಾಗೂ ಸ್ನೇಹಿತರಿಗೆ ತಿಳಿದಿದೆ. ಇಬ್ಬರು ಮಕ್ಕಳನ್ನೂ ನಮ್ಮ ಕುಟುಂಬ ಒಪ್ಪಿದೆ. ನಾನು ಸಂಬಂಧವಿಟ್ಟುಕೊಂಡಿದ್ದ ಮಹಿಳೆಯು 2019ರಿಂದ ನನಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಈ ಕುರಿತು ಹಿಂದೆಯೇ ದೂರು ನೀಡಿದ್ದೇನೆ. ನನ್ನ ವಿರುದ್ಧ ಮಾನನಷ್ಟ ವಿಷಯಗಳನ್ನು ಪಸರಿಸದಂತೆ ತಡೆ ನೀಡಲು ಕೋರಿ ಬಾಂಬೆ ಹೈಕೋರ್ಟ್ಗೂ ಅರ್ಜಿ ಸಲ್ಲಿಸಿದ್ದೇನೆ’ ಎಂದು ಪ್ರಕಟಣೆಯಲ್ಲಿ ಧನಂಜಯ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.