ಸಾವು
(ಪ್ರಾತಿನಿಧಿಕ ಚಿತ್ರ)
ಪಠಾಣ್(ಗುಜರಾತ್): ಗುಜರಾತ್ನ ಪಠಾಣ್ ಜಿಲ್ಲೆಯ ವಿವಾಹಿತ ಮಹಿಳೆ, ಪ್ರಿಯಕರನ ಜೊತೆ ಸೇರಿ ಮಧ್ಯವಯಸ್ಕ ವ್ಯಕ್ತಿಯನ್ನು ಕೊಂದು, ಶವವನ್ನು ಬಟ್ಟೆಗಳಿಂದ ಸುತ್ತಿ ಬೆಂಕಿ ಹಚ್ಚಿ ಸಾವನ್ನಪ್ಪಿದ್ದೇನೆ ಎಂದು ಬಿಂಬಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಪಠಾಣ್ನ ಸಂತಲ್ಪುರ್ ತಾಲ್ಲೂಕಿನ ಜಖೋತ್ರಾ ಗ್ರಾಮದ ವ್ಯಕ್ತಿಯ ಅರ್ಧ ಸುಟ್ಟ ಶವ ಮಂಗಳವಾರ ರಾತ್ರಿ ಪತ್ತೆಯಾಗಿದ್ದು, ಪೊಲೀಸರು ಗೀತಾ ಅಹಿರ್ (22) ಮತ್ತು ಆಕೆಯ ಪ್ರಿಯಕರ ಭರತ್ ಅಹಿರ್ (21) ಅವರನ್ನು ಬುಧವಾರ ಮುಂಜಾನೆ ಪಾಲನ್ಪುರ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ದೃಶ್ಯಂ’ಚಿತ್ರದಿಂದ ಪ್ರೇರಿತರಾಗಿ ಸತ್ತಿದ್ದೇನೆಂದು ಬಿಂಬಿಸಲು ಸಂಚು ರೂಪಿಸಿದ್ದಾಗಿ ಆರೋಪಿ ಮಹಿಳೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಠಾಣ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿ. ಕೆ. ನಾಯ್, ಜಖೋತ್ರಾದಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದ ಗೀತಾ ಎಂಬ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ. ತಾನು ಮೃತಪಟ್ಟಿದ್ದೇನೆಂದು ಎಲ್ಲರೂ ನಂಬಿದ ಬಳಿಕ ಗುಜರಾತ್ನಿಂದ ಹೊರಹೋಗಿ ಪ್ರಿಯಕರನ ಜೊತೆ ಜೀವಿಸಬಹುದು ಎಂಬುದು ಆಕೆಯ ಯೋಜನೆಯಾಗಿತ್ತು ಎಂದು ಅವರು ಹೇಳಿದ್ಧಾರೆ. ಇದಕ್ಕಾಗಿ, ಪ್ರಿಯಕರನಿಗೆ ಒಂದು ಮೃತದೇಹವನ್ನು ತರುವಂತೆ ಗೀತಾ ಹೇಳಿದ್ದಳು.
ಮಂಗಳವಾರ ರಾತ್ರಿ, ಗೀತಾ ಎಲ್ಲರೂ ಮಲಗಿದ್ದಾಗ ಮನೆಯಿಂದ ಹೊರಟು ಪ್ರಿಯಕರನ ಜೊತೆ ಸೇರಿ ಮೃತದೇಹಕ್ಕೆ ತನ್ನಬಟ್ಟೆಗಳನ್ನು ಹಾಕಿ ಬೆಂಕಿ ಹಚ್ಚಿದ್ದಾರೆ. ನಂತರ, ಆಕೆಯ ಪತಿ ಮತ್ತು ಇತರ ಕುಟುಂಬ ಸದಸ್ಯರು ಆಕೆಯನ್ನು ಹುಡುಕುತ್ತಿದ್ದಾಗ, ಗ್ರಾಮದ ಹೊರವಲಯದಲ್ಲಿರುವ ಕೊಳದ ಬಳಿ ಅರ್ಧ ಸುಟ್ಟ ಶವ ಸಿಕ್ಕಿದೆ. ಅದರ ಮೇಲೆ ಗೀತಾ ಅವರ 'ಘಾಗ್ರಾ' ಮತ್ತು ಕಾಲುಂಗುರಗಳು ಪತ್ತೆಯಾಗಿದ್ದರಿಂದ ಆರಂಭದಲ್ಲಿ ಅದು ಗೀತಾ ಅವರ ಶವ ಎಂದೇ ಸಂಬಂಧಿಕರು ಭಾವಿಸಿದ್ದರು. ಶವವನ್ನು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾಗ ಅದು ಪುರುಷನ ಶವ ಎಂಬುದು ಗೊತ್ತಾಗಿದೆ. ಕುಟುಂಬ ಸದಸ್ಯರಿಂದ ಮಾಹಿತಿ ಪಡೆದ ನಂತರ ಕೊಲೆ ಪ್ರಕರಣ ದಾಖಲಿಸಿರುವುದಾಗಿ ಎಸ್ಪಿ ಹೇಳಿದ್ದಾರೆ.
ಮೃತ ವ್ಯಕ್ತಿಯನ್ನು 56 ವರ್ಷದ ಹರ್ಜಿಭಾಯ್ ಸೋಲಂಕಿ ಎಂದು ಗುರುತಿಸಲಾಗಿದೆ. ಸಮೀಪದ ಹಳ್ಳಿಯ ಅಲೆಮಾರಿ ಸೋಲಂಕಿಗೆ ಲಿಫ್ಟ್ ಕೊಡುವುದಾಗಿ ನಂಬಿಸಿ ಆಕೆಯ ಪ್ರಿಯಕರ ಭರತ್, ಬೈಕ್ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕುತ್ತಿಗೆ ಬಿಗಿದು ಕೊಂದಿದ್ದಾನೆ. ಬಳಿಕ, ಪಲಾಂಪುರ್ ರೈಲ್ವೆ ನಿಲ್ದಾಣದಲ್ಲಿ ರಾಜಸ್ಥಾನಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಗೀತಾ ಮತ್ತು ಭರತ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
‘ದೃಶ್ಯಂ ಚಿತ್ರದಿಂದ ಪ್ರೇರಣೆ‘
ದೃಶ್ಯಂ 1 ಮತ್ತು ದೃಶ್ಯಂ 2 ಎರಡೂ ಚಿತ್ರಗಳನ್ನು ನೋಡಿದ್ದೆ. ಅದೆಿಂದ, ಪ್ರೇರಿತಳಾಗಿ, ನಾನು ಮೃತಪಟ್ಟಿದ್ದೇನೆಂದು ಬಿಂಬಿಸಿ ದೂರದ ಊರಿಗೆ ಹೋಗಿ ಪ್ರಿಯಕರನ ಜೊತೆ ಜೀವನ ನಡೆಸಲು ನಿರ್ಧರಿಸಿದ್ದೆನು ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ಗೀತಾ ತಪ್ಪೊಪ್ಪಿಕೊಂಡಿದ್ದಾಳೆ.
ಸೋಲಂಕಿ ಮೃತದೇಹಕ್ಕೆ ಘಾಗ್ರಾ ತೊಡಿಸಿ. ಬಳಿಕ. ಪೆಟ್ರೋಲ್ ಹಾಕಿ ಸುಟ್ಟೆವು ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ. ಜೋಧಪುರ ರೈಲನ್ನು ಹತ್ತುವ ಸಂದರ್ಭದಲ್ಲಿ ಅವರು ಪೊಲೀಸರು ಬಲೆಗೆ ಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.