ADVERTISEMENT

ಕಾರಿನಡಿ ಯುವತಿಯ ಮೃತದೇಹ ಎಳೆದೊಯ್ದ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ

ಪಿಟಿಐ
Published 12 ಜನವರಿ 2023, 13:04 IST
Last Updated 12 ಜನವರಿ 2023, 13:04 IST
.
.   

ನವದೆಹಲಿ: ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹವನ್ನು ಎಳೆದೊಯ್ದಿದ್ದ ಪ್ರಕರಣದ ಆರೋಪಿ ಅಶುತೋಷ್ ಭಾರದ್ವಾಜ್‌ ಎಂಬುವವರ ಜಾಮೀನು ಅರ್ಜಿಯನ್ನು ಇಲ್ಲಿನ ಮೆಟ್ರೊಪಾಲಿಟನ್‌ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.

‘ಅಶುತೋಷ್ ಮೇಲಿನ ಆರೋಪವು ಗುರುತರವಾಗಿದೆ ಮತ್ತು ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿರುವುದರಿಂದ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ’ ಎಂದು ಮೆಟ್ರೋಪಾಲಿಟನ್ ನ್ಯಾಯಾಧೀಶೆ ಸನ್ಯಾ ದಲಾಲ್‌ ಹೇಳಿದ್ದಾರೆ.

‘ಸಹ ಆರೋಪಿ ದೀಪಕ್‌ ಎಂಬಾತ ಕಾರು ಚಲಾಯಿಸುತ್ತಿದ್ದ ಎಂದು ಹೇಳಿಕೆ ನೀಡುವ ಮೂಲಕ ಅಶುತೋಷ್‌ ತನಿಖೆಯ ದಾರಿತಪ್ಪಿಸುತ್ತಿದ್ದಾರೆ’ ಎಂದು ಹೆಚ್ಚುವರಿ ಸರ್ಕಾರಿ ವಕೀಲ ಅತುಲ್‌ ಶ್ರೀವಾಸ್ತವ ಆರೋಪಿಸಿದ್ದಾರೆ.

ADVERTISEMENT

‘ಇನ್ನೊಬ್ಬ ಆರೋಪಿ ಅಮಿತ್‌ ಎಂಬಾತ ಕಾರು ಚಲಾಯಿಸುತ್ತಿದ್ದುದು ತನಿಖೆಯಿಂದ ತಿಳಿದು ಬಂದಿದೆ. ಆತನಿಗೆ ಚಾಲನಾ ಪರವಾನಗಿ ಇರಲಿಲ್ಲ’ ಎಂದೂ ಹೇಳಿದ್ದಾರೆ.

ಜನವರಿ 1 ರಂದು ಅಂಜಲಿ ಸಿಂಗ್ ಎಂಬ ಯುವತಿಯು ಚಾಲನೆ ಮಾಡುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಡಿ ಆಕೆ ಸಿಲುಕಿದ್ದರೂ ಆರೋಪಿಗಳು 12 ಕಿ.ಮೀ.ವರೆಗೆ ಕಾರನ್ನು ನಿಲ್ಲಿಸದೆ ಸಾಗಿದ್ದರು.

ಈ ಸಂಬಂಧ ದೀಪಕ್‌ ಖನ್ನಾ, ಅಮಿತ್‌ ಖನ್ನಾ, ಕೃಷ್ಣ, ಮಿಥುನ್‌ ಮತ್ತು ಮನೋಜ್‌ ಮಿತ್ತಲ್‌ ಎಂಬುವವರನ್ನೂ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.