ಮುಂಬೈ: ಮುಂದಿನ ವಿಚಾರಣೆ ನಡೆಯುವ ಡಿಸೆಂಬರ್ 9ರವರೆಗೆ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ಅವರ ತಂದೆ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಯಾವುದೇ ಟ್ವೀಟ್ ಅಥವಾ ಸಾರ್ವಜನಿಕ ಹೇಳಿಕೆಯನ್ನು ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಾಂಬೆ ಹೈಕೋರ್ಟ್ಗೆ ಗುರುವಾರ ಹೇಳಿದ್ದಾರೆ.
‘ಸಮೀರ್ ವಾಂಖೆಡೆ ಅವರ ಜಾತಿ ಪ್ರಮಾಣೀಕರಣದ ವಿರುದ್ಧದ ಆರೋಪಗಳ ಬಗ್ಗೆ ಜಾತಿ ಪರಿಶೀಲನಾ ಸಮಿತಿಗೆ ದೂರು ನೀಡಿದ್ದೀರಾ? ಹಾಗೆ ಮಾಡದಿದ್ದರೆ ಮಾಧ್ಯಮ ಪ್ರಚಾರ ನಡೆಸಿದ್ದರ ಉದ್ದೇಶವೇನು?’ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿತು. ಇದು ಸಚಿವರ ಘನತೆಗೆ ತಕ್ಕುದಲ್ಲ ಎಂದೂ ಹೇಳಿತು. ಅದಕ್ಕೆ ಉತ್ತರವಾಗಿ ಸಚಿವ ಮಲಿಕ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ವಿಚಾರಣೆವರೆಗೆ ವಾಂಖೆಡೆ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಸಚಿವರನ್ನು ನಿರ್ಬಂಧಿಸುವ ಆದೇಶವನ್ನು ಹೊರಡಿಸಲು ನ್ಯಾಯಮೂರ್ತಿಗಳಾದ ಎಸ್.ಜೆ. ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ಅವರ ಪೀಠ ತೀರ್ಮಾನಿಸಿದ ನಂತರ ಮಲಿಕ್ ಪರ ವಕೀಲ ಕಾರ್ಲ್ ತಾಂಬೋಲಿ ಅವರು ಈ ಹೇಳಿಕೆ ನೀಡಿದರು.
‘ಮಲಿಕ್ ಅವರ ಟ್ವೀಟ್ಗಳು ದುರುದ್ದೇಶದಿಂದ ಕೂಡಿವೆ ಎಂದು ಮೇಲ್ನೋಟಕ್ಕೆ ಕಂಡು ಬಂದಿವೆ. ಸಚಿವರು ಏಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ? ಅವರು ಏಕೆ ಹೀಗೆ ವರ್ತಿಸಬೇಕು? ಇದು ದುರುದ್ದೇಶವಲ್ಲದೆ ಮತ್ತೇನೂ ಅಲ್ಲ’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.