ADVERTISEMENT

ದೇಶದಾದ್ಯಂತ ಲಸಿಕೆ: ಸಂಜೆ ವೇಳೆಗೆ 1,65,714 ಜನರಿಗೆ ಕೋವಿಡ್‌ ಲಸಿಕೆ

ಕೋವಿಡ್‌–19 ಪಿಡುಗಿನ ವಿರುದ್ಧ ಜಗತ್ತಿನ ಅತಿ ದೊಡ್ಡ, ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು. ಅದರೊಂದಿಗೆ ದೇಶದ ಒಟ್ಟು 3,006 ಕೇಂದ್ರಗಳಲ್ಲು ಲಸಿಕೆ ಹಾಕುವಿಕೆ ಆರಂಭವಾಯಿತು. ಈ ಎಲ್ಲ ಕೇಂದ್ರಗಳ ನಡುವೆ ಆನ್‌ಲೈನ್‌ ಮೂಲಕ ಸಂಪರ್ಕ ಏರ್ಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ನೂರು ಫಲಾನುಭವಿಗಳಿಗೆ ಮೊದಲ ದಿನ ಲಸಿಕೆ ಹಾಕಲಾಗುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಈ ಲಸಿಕಾ ಅಭಿಯಾನದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ.

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 15:56 IST
Last Updated 16 ಜನವರಿ 2021, 15:56 IST

ಬೆಳಗಾವಿ ಜಿಲ್ಲೆಯ ಕೋವಿಡ್ ಲಸಿಕೆ ಮಾಹಿತಿ : ನಿಗದಿಯಾಗಿದ್ದು 1,246, ಪಡೆದವರು 939 ಮಂದಿ

ಮೊದಲ ದಿನ 1,65,714 ಜನರಿಗೆ ಕೋವಿಡ್‌ ಲಸಿಕೆ

ದೇಶದಾದ್ಯಂತ ಮೊದಲ ದಿನ ಸಂಜೆ 5.30ರ ಸುಮಾರಿಗೆ 1,65,714 ಜನರಿಗೆ ಕೋವಿಡ್‌ ಲಸಿಕೆ ಹಾಕಲಾಗಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆ ತಿಳಿಸಿದೆ.

ಬಿಜೆಪಿಯ ಡಾ.ಶರ್ಮಾ, ಟಿಎಂಸಿಯ ಆರ್‌.ಚಟರ್ಜಿ ಲಸಿಕೆ ಪಡೆದ ಮೊದಲ ರಾಜಕಾರಣಿಗಳು

ಉತ್ತರ ಪ್ರದೇಶದ ಬಿಜೆಪಿ ಸಂಸದ ಡಾ.ಮಹೇಶ್ ಶರ್ಮಾ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ರವೀಂದ್ರನಾಥ್‌ ಚಟರ್ಜಿ ಅವರು ಕೋವಿಡ್‌ ಲಸಿಕೆ ಪಡೆದ ಮೊದಲ ರಾಜಕಾರಣಿಗಳಾಗಿದ್ದಾರೆ. 

ಚಿತ್ರಗಳಲ್ಲಿ: ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ

ಕೋವಿಡ್-19 ವಿರುದ್ಧ ಭಾರತದ ಲಸಿಕೆ 'ಸಂಜೀವಿನಿ'ಯಾಗಿ ಕೆಲಸ ಮಾಡಲಿದೆ: ಹರ್ಷವರ್ಧನ್

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಲಸಿಕೆಯು 'ಸಂಜೀವಿನಿ'ಯಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ಕೋ–ವ್ಯಾಕ್ಸಿನ್ ಲಸಿಕೆ ಅಭಿಯಾನಕ್ಕೆ ಚಾಲನೆ

ದೆಹಲಿಯ ರಾಮ್‌ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಕೋ–ವ್ಯಾಕ್ಸಿನ್ ಲಸಿಕೆ ನೀಡಲಾಯಿತು.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸೆಕ್ಯೂರಿಟ್ ಗಾರ್ಡ್‌ ಹಾಗೂ ಪೌರ ಕಾರ್ಮಿಕರೊಬ್ಬರಿಗೆ ಮೊದಲಿಗೆ ಕೊರೊನಾ ಲಸಿಕೆ ನೀಡಲಾಯಿತು

ಯಾದಗಿರಿ: ಜಿಲ್ಲೆಯ ಐದು ಕಡೆ ಕೋ–ವ್ಯಾಕ್ಸಿನ್ ಲಸಿಕೆಗೆ ಚಾಲನೆ

ನಗರದ ಹೊಸ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಐದು ಕಡೆ ಕೋ–ವ್ಯಾಕ್ಸಿನ್ ಲಸಿಕೆಗೆ ಚಾಲನೆ ನೀಡಲಾಯಿತು. 

ದೇಶದಾದ್ಯಂತ ಲಸಿಕೆ ವಿತರಣೆ:  ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

ಕೋವಿಡ್‌–19 ಪಿಡುಗಿನ ವಿರುದ್ಧ ಜಗತ್ತಿನ ಅತಿ ದೊಡ್ಡ, ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ಅದರೊಂದಿಗೆ ದೇಶದ ಒಟ್ಟು 3,006 ಕೇಂದ್ರಗಳಲ್ಲಿ ಲಸಿಕೆ ಹಾಕುವಿಕೆ ಆರಂಭವಾಯಿತು. ಈ ಅಭಿಯಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದೆ.

ಶಿವಮೊಗ್ಗದಲ್ಲಿ ಲಸಿಕೆ ಅಭಿಯಾನ ಆರಂಭ

ಹುಬ್ಬಳ್ಳಿಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ

ಕಲಬುರ್ಗಿಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ

ಲಸಿಕೆ ಪಡೆದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಪೂನವಾಲಾ

ಪುಣೆ: ಪುಣೆ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ ಅವರು ತಮ್ಮ ಕಂಪನಿ ತಯಾರಿಸಿರುವ, ಅಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಸಂಶೋಧಿಸಿರುವ ಕೋವಿಡ್‌ ಲಸಿಕೆಯನ್ನು ಪಡೆದರು.  ಅವರು ತಮ್ಮ ಕಂಪನಿ ತಯಾರಿಸಿರುವ, ಅಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಸಂಶೋಧಿಸಿರುವ ಕೋವಿಡ್‌ ಲಸಿಕೆಯನ್ನು ಪಡೆದರು. 

ಮುಂಬೈನಲ್ಲಿ ಲಸಿಕೆ ಪಡೆಯುವವರಿಗೆ ಆರತಿ ಬೆಳಗಿ ಸ್ವಾಗತ

ಮುಂಬೈ: ಮುಂಬೈನ ಕೂಪರ್‌ ಆಸ್ಪತ್ರೆಗೆ ಶನಿವಾರ ಬೆಳಿಗ್ಗೆ ಕೋವಿಡ್‌ ಲಸಿಕೆ ಆಗಮಿಸಿದ್ದು, ಆರೋಗ್ಯ ಕಾರ್ಯಕರ್ತರು ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಕೂಪರ್‌ ಆಸ್ಪತ್ರೆಯ ಸಿಬ್ಬಂದಿ, ಲಸಿಕೆ ಅಭಿಯಾನದ ಮೊದಲ ಫಲಾನುಭವಿಗಳನ್ನು ಆರತಿ ಮಾಡಿ, ಸಿಹಿ ಹಂಚಿ ಸ್ವಾಗತಿಸಿದರು.

ಮಹಾರಾಷ್ಟ್ರದ 285 ಕೇಂದ್ರಗಳಲ್ಲಿ ಮೊದಲ ಹಂತದ ಲಸಿಕೆ ಅಭಿಯಾನ ನಡೆಯಲಿದೆ. ಪ್ರಧಾನಿ ಮೋದಿ ಅವರು ವೆಬ್‌ಕಾಸ್ಟ್‌ ಮೂಲಕ ಕೂಪರ್‌ ಆಸ್ಪತ್ರೆ ಮತ್ತು ಜಲ್ನಾ ಜಿಲ್ಲೆಯ ಮರಾಠವಾಡ ಆಸ್ಪತ್ರೆಯಲ್ಲಿ ನಡೆಯಲಿರುವ ಲಸಿಕೆ ಅಭಿಯಾನವನ್ನು ವೀಕ್ಷಿಸಲಿದ್ದಾರೆ.

ಸಂತೋಷವಾಗಿದೆ, ತೃಪ್ತನಾಗಿದ್ದೇನೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌

ನಾನು ಇಂದು ತುಂಬಾ ಸಂತೋಷಗೊಂಡಿದ್ದೇನೆ. ತೃಪ್ತನಾಗಿದ್ದೇನೆ. ನಾವು ಕಳೆದ ಒಂದು ವರ್ಷದಿಂದ ಪ್ರಧಾನ ಮಂತ್ರಿಯ ನಾಯಕತ್ವದಲ್ಲಿ ಕೋವಿಡ್‌ ವಿರುದ್ಧ ಹೋರಾಡುತ್ತಿದ್ದೇವೆ. ಕೋವಿಡ್‌ ವಿರುದ್ಧದ ಅಂತಿಮ ಹಂತದ ಹೋರಾಟದಲ್ಲಿ ಲಸಿಕೆ ಅಭಿಯಾನವು 'ಸಂಜೀವನಿ'ಯಾಗಿ ಆಗಿ ಕಾರ್ಯನಿರ್ವಹಿಸುತ್ತದೆ

- ಹರ್ಷವರ್ಧನ್‌,  ಕೇಂದ್ರ ಆರೋಗ್ಯ ಸಚಿವ 

ದೆಹಲಿಯ ಏಮ್ಸ್‌ನಲ್ಲಿ ಲಸಿಕೆ ಪಡೆದ ಮೊದಲಿಗರಿವರು

ಸ್ವಚ್ಛತಾ ಕಾರ್ಯಕರ್ತ ಮನೀಶ್ ಕುಮಾರ್ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಸಮ್ಮುಖದಲ್ಲಿ ದೆಹಲಿಯ ಏಮ್ಸ್‌ನಲ್ಲಿ ಕೋವಿಡ್‌ ಲಸಿಕೆ ಪಡೆದರು. ಏಮ್ಸ್‌ನಲ್ಲಿ ಲಸಿಕೆ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮನೀಶ್‌ ಕುಮಾರ್‌ ಪಾತ್ರರಾಗಿದ್ದಾರೆ.

ಲಸಿಕೆ ಪಡೆದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ

ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ಕೋವಿಡ್‌ ಲಸಿಕೆಯನ್ನು ದೆಹಲಿಯ ಏಮ್ಸ್ ನಲ್ಲಿ ಸ್ವೀಕರಿಸಿದರು.

ರಾಜ್ಯದಲ್ಲಿ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಯಡಿಯೂರಪ್ಪ ಚಾಲನೆ

ಕೋವಿಡ್‌ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ಭಾಷಣ... 

ಎಲ್ಲರೂ ಕೇಳುತ್ತಿದ್ದರು ಲಸಿಕೆ ಯಾವಾಗ ಸಿಗುತ್ತದೆ ಎಂದು. ಅದು ಈಗ ಲಭ್ಯವಾಗಿದೆ. ಈ ಸಂದರ್ಭದಲ್ಲಿ ನಾನು ದೇಶದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾನ್ಯವಾಗಿ ಲಸಿಕೆ ಅಭಿವೃದ್ಧಿಗೆ ವರ್ಷಗಳೇ ಬೇಕಾಗುತ್ತವೆ. ಆದರೆ, ಒಂದೇ ವರ್ಷದ ಅವಧಿಯಲ್ಲಿ ಒಂದಲ್ಲ, ಎರಡು 'ಮೇಡ್‌ ಇನ್‌ ಇಂಡಿಯಾ' ಲಸಿಕೆಗಳು ತಯಾರಾಗಿವೆ. ಈ ಮಧ್ಯೆ ಇತರ ಲಸಿಕೆಗಳ ಅಭಿವೃದ್ಧಿ ಕಾರ್ಯವೂ ವೇಗವಾಗಿ ನಡೆಯುತ್ತಿದೆ. 

ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳು ಅತ್ಯಗತ್ಯ. ಎರಡು ಬಾರಿಯ ಲಸಿಕೆಗೆ ಒಂದು ತಿಂಗಳ ಅಂತರ ಇರಬೇಕು ಎಂದು ತಜ್ಞರು ಹೇಳಿದ್ದಾರೆ. 

ಮೊದಲ ಲಸಿಕೆ ನಂತರ ಮಾಸ್ಕ್‌ ಧರಿಸುವಿಕೆ ಮತ್ತು ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ಯಾರೂ ಎಚ್ಚರ ತಪ್ಪಬಾರದು. ಯಾಕೆಂದರೆ, ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗುವುದೇ ಎರಡನೇ ಡೋಸ್‌ನ ನಂತರ. 

ಭಾರತದಲ್ಲಿ ನಡೆಯುತ್ತಿರುವ ಇಂಥ ಲಸಿಕೆ ಅಭಿಯಾನ ಇತಿಹಾಸದಲ್ಲೇ ಎಂದೂ, ಎಲ್ಲಿಯೂ ನಡೆದಿಲ್ಲ. 100 ದೇಶಗಳು 3 ಕೋಟಿ ಜನಸಂಖ್ಯೆ ಹೊಂದಿವೆ. ಆದರೆ, ಭಾರತವೊಂದೇ 3 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಿದ್ದೇವೆ. 

ಈ ಒಂದು ವರ್ಷವನ್ನು ಅವಲೋಕಿಸಿದಾಗ ನಾವು ವ್ಯಕ್ತಿಯಾಗಿ, ಕುಟುಂಬವಾಗಿ, ರಾಷ್ಟ್ರವಾಗಿ ಮಹತ್ತರವಾದುದ್ದನ್ನು ಕಲಿತಿದ್ದೇವೆ. ಕೋವಿಡ್‌ ಜನರನ್ನು ಅವರ ಕುಟುಂಬದಿಂದ ದೂರವಿಟ್ಟಿತು. ಅಸ್ಪತ್ರೆಗೆ ದಾಖಲಾದ ತಮಗಿಂತ ಕಿರಿಯವರನ್ನು ಭೇಟಿ ಮಾಡಲು ಹಲವರಿಗೆ ಸಾಧ್ಯವೇ ಆಗಲಿಲ್ಲ. ಮಾರಕ ಕಾಯಿಲೆಯಿಂದ ಸತ್ತವರ ಅಂತ್ಯ ಸಂಸ್ಕಾರವನ್ನುಸೂಕ್ತ ರೀತಿಯಲ್ಲಿ ಮಾಡಲು ಸಾಧ್ಯವಾಗಲಿಲ್ಲ. 

ಕೋವಿಡ್‌ ವಿರುದ್ಧದ ಹೋರಾಟದ ಹಲವು ವಿಚಾರಗಳಲ್ಲಿ ಜಗತ್ತಿಗೆ ನಾವು ಮಾದರಿಯಾಗಿದ್ದೇವೆ. ಕೋವಿಡ್‌ ಬರುತ್ತಲೇ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಸಿಲುಕಿದ್ದ ನಮ್ಮವರನ್ನು ನಾವು ರಕ್ಷಿಸಿ ಕರೆತಂದೆವು. ಅಷ್ಟೇ ಅಲ್ಲ, ಇತರ ದೇಶಗಳ ನಾಗರಿಕರನ್ನೂ ರಕ್ಷಿಸುವ ಕಾರ್ಯ ಕೈಗೊಂಡೆವು. 

ಲಸಿಕೆ ಅಭಿಯಾನ ಆರಂಭವಾಗಿದೆ ಎಂದು ಜನರು ಮಾಸ್ಕ್‌ ಧರಿಸುವುದರಿಂದ,  ಅಂತರ ಕಾದುಕೊಳ್ಳುವುದರಿಂದ ವಿಮುಖವಾಗಬಾರದು. ಕೋವಿಡ್‌ ನಿಯಮಾವಳಿಗಳನ್ನು ಪಾಲನೆ ಮಾಡುವುದನ್ನು ನಿಲ್ಲಿಸಬಾರದು. ನಾವು ಇನ್ನೊಂದು ಪ್ರತಿಜ್ಞೆ ತೆಗೆದುಕೊಳ್ಳಬೇಕು. ಅದೇನೆಂದರೆ, ಲಸಿಕೆಯನ್ನೂ ಪಡೆಯುತ್ತೇವೆ, ಎಚ್ಚರಿಕೆಯನ್ನು ವಹಿಸುತ್ತೇವೆ ಎಂಬುದು. 

ಕಷ್ಟಗಳ ಹೊರತಾಗಿಯೂ, ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರವನ್ನು ಭಾರತ ರಾಷ್ಟ್ರಗಳಿಗೆ ನೀಡಿದೆ. ಪ್ಯಾರೆಸಿಟಮಾಲ್ ಆಗಿರಲಿ, ಹೈಡ್ರಾಕ್ಸಿಕ್ಲೋರೋಕ್ವಿನ್ ಅಥವಾ ಪರೀಕ್ಷಾ ಸಾಧನವಾಗಲಿ. ಇತರ ದೇಶಗಳ ಜನರನ್ನು ಉಳಿಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡಿದೆ

ನಾವು ನಮ್ಮದೇ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಹೊತ್ತಿನಲ್ಲಿ ಇಂದು ಜಗತ್ತು ಭಾರತವನ್ನು ಭರವಸೆಯಿಂದ ನೋಡುತ್ತಿದೆ. ನಮ್ಮ ಲಸಿಕೆ ಅಭಿಯಾನ ಆರಂಭವಾಗುತ್ತಲೇ, ವಿಶ್ವದ ಇತರ ದೇಶಗಳು ಇದರ ಲಾಭ ಪಡೆಯುತ್ತಿವೆ. ಭಾರತದ ಲಸಿಕೆ ಮತ್ತು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಜನರ ಹಿತಾಸಕ್ತಿಗಾಗಿ ಬಳಸಬೇಕು, ಇದು ನಮ್ಮ ಬದ್ಧತೆ.

PV Web Exclusive| ಹಾಗಿದ್ದರೆ ಲಸಿಕೆ ಯಾರಿಗೆ ಬೇಕು? ಯಾರಿಗೆ ಬೇಡ?

Explainer| ಲಸಿಕೆ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ?

ಕೋವಿಡ್ ಲಸಿಕೆಯನ್ನು ಯಾರು ಪಡೆಯಬಾರದು? ಇಲ್ಲಿದೆ ಮಾಹಿತಿ

ಬಿಬಿಎಂಪಿ: 6 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಿಕೆ

 ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ 16ರಂದು ಒಟ್ಟು ಆರು ಲಸಿಕಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ನೀಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಕೋವಿಡ್‌ ಲಸಿಕೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರವಾಗಿದೆ. ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ಲಸಿಕೆಗಳನ್ನು ಬುಧವಾರ ಹಸ್ತಾಂತರಿಸಲಾಗುತ್ತದೆ. ಲಸಿಕೆ ನೀಡುವ ಮೊದಲ ಕಾರ್ಯಕ್ರಮ ಇದೇ 16ರಂದು ನಡೆಯಲಿದೆ. ಅಂದು ಕೇವಲ 6 ಲಸಿಕಾ ಕೇಂದ್ರಗಳಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಗುರುತಿನ ಚೀಟಿ ತೋರಿಸಿದರೆ ಲಸಿಕೆ

ಕೋವಿಡ್ ಲಸಿಕೆ ವಿತರಣೆ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಹೆಸರು ನೋಂದಣಿ ಸಮಯದಲ್ಲಿ ನೀಡಿದ ಗುರುತಿನ ಚೀಟಿಯನ್ನು ತೋರಿಸಿದರೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದೇ 16ರಿಂದ ಲಸಿಕೆ ವಿತರಣೆ ಪ್ರಾರಂಭವಾಗಲಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡವರ ಮೊಬೈಲ್‌ ಸಂಖ್ಯೆಗೆ ನಿಗದಿತ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯ ಸಂದೇಶವನ್ನು ಕಳುಹಿಸಲಾಗುತ್ತದೆ. ಅದರ ಅನುಸಾರ ಬಂದು ಲಸಿಕೆಯನ್ನು ಪಡೆಯಬೇಕು. ಲಸಿಕೆ ಅಭಿಯಾನ ನಡೆಯುವ ಸ್ಥಳದಲ್ಲಿ ವ್ಯಕ್ತಿಯ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸಬೇಕು. ಅದನ್ನು ಕೇಂದ್ರದಲ್ಲಿನ ಸಿಬ್ಬಂದಿ ಪರಿಶೀಲನೆ ನಡೆಸುತ್ತಾರೆ ಎಂದು ಇಲಾಖೆ ಸೂಚಿಸಿದೆ.

ದೇಶದಾದ್ಯಂತ ವಿತರಿಸಲಾಗುತ್ತಿರುವ ಕೋವಿಡ್‌ ಲಸಿಕೆಗಳು ಸುರಕ್ಷಿತವಾಗಿವೆ. ವಿವಿಧ ಹಂತಗಳಲ್ಲಿ ಅವುಗಳ ಸುರಕ್ಷತೆ ಹಾಗೂ ಫಲಿತಾಂಶದ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಹಾಗಾಗಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆಯೇ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಇಲಾಖೆ ಮನವಿ ಮಾಡಿದೆ.

ದೇಶದ ವಿವಿಧೆಡೆಗಳಲ್ಲಿ ಲಸಿಕೆಗೆ ನಡೆದಿರುವ ಸಿದ್ಧತೆಗಳು

ಬೆಂಗಳೂರಿನಲ್ಲಿ ಲಸಿಕೆ ಅಭಿಯಾನಕ್ಕೆ ಸಿದ್ಧತೆ

ಲಸಿಕೆ ಕುರಿತು ರಾಜ್ಯಗಳಿಗೆ ಕೇಂದ್ರದ ಸೂಚನೆ

* ಗರಿಷ್ಠ 10 ದಿನಗಳ ಒಳಗೆ ಮೊದಲ ಹಂತದ ಅಭಿಯಾನವನ್ನು ಪೂರ್ಣಗೊಳಿಸಬೇಕು  

* ಪ್ರತಿ ದಿನ ಸರಾಸರಿ 100 ಮಂದಿಗೆ ಲಸಿಕೆ ಹಾಕಬೇಕು ಮತ್ತು ಶೇ 10ರಷ್ಟು ಲಸಿಕೆಗಳನ್ನು ಮೀಸಲು ಡೋಸ್‌ಗಳೆಂದು ತೆಗೆದಿರಿಸಬೇಕು

* ಅನಗತ್ಯ ಆತುರ ತೋರಬಾರದು ಮತ್ತು ಪ್ರತಿ ದಿನದ ನಿಗದಿಗಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲು ಮುಂದಾಗಬಾರದು

* ಲಸಿಕೆ ನೀಡಿಕೆ ಪ್ರಕ್ರಿಯೆ ಸ್ಥಿರಗೊಂಡ ಬಳಿಕ, ಲಸಿಕೆ ನೀಡಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.