ADVERTISEMENT

ತ್ಯಾಜ್ಯ ನೀರು ನಿರ್ವಹಣೆಯಲ್ಲಿ ವಿಫಲ: ಎನ್‌ಒಐಡಿಎಗೆ ₹100 ಕೋಟಿ ದಂಡ

ಪಿಟಿಐ
Published 6 ಆಗಸ್ಟ್ 2022, 15:07 IST
Last Updated 6 ಆಗಸ್ಟ್ 2022, 15:07 IST
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ    

ನವದೆಹಲಿ: ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಚರಂಡಿಗೆ ಬಿಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ವಿಫಲವಾಗಿರುವ ನ್ಯೂ ಓಕ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎನ್‌ಒಐಡಿಎ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಶನಿವಾರ ₹100 ಕೋಟಿ ದಂಡ ವಿಧಿಸಿದೆ.

ಎನ್‌ಜಿಟಿ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಆದರ್ಶ್‌ಕುಮಾರ್‌ ಗೋಯಲ್‌ ಅವರ ನೇತೃತ್ವದ ಪೀಠವು ದೆಹಲಿ ಜಲ ಮಂಡಳಿಗೂ ₹50 ಕೋಟಿ ದಂಡ ಹಾಕಿದೆ.

‘ನೋಯ್ಡಾದಲ್ಲಿರುವ 95 ಗ್ರೂಪ್‌ ಹೌಸಿಂಗ್‌ ಸೊಸೈಟಿಗಳ ಪೈಕಿ 56 ಸೊಸೈಟಿಗಳು ತ್ಯಾಜ್ಯ ನೀರು ಸಂಸ್ಕರಿಸುವ ಅಥವಾ ಭಾಗಶಃ ಸಂಸ್ಕರಿಸುವ ಸೌಕರ್ಯ ಹೊಂದಿವೆ. ಉಳಿದಂತೆ ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗಳಿಗೆ ಹರಿಸಲಾಗುತ್ತಿದೆ. ಅವು ಯಮುನಾ ನದಿಗೆ ಸೇರಿ ನದಿ ನೀರು ಕಲುಷಿತಗೊಳ್ಳುತ್ತಿದೆ’ ಎಂದು ಪೀಠ ಹೇಳಿದೆ.

ADVERTISEMENT

‘ತ್ಯಾಜ್ಯ ನೀರನ್ನು ಸಂಸ್ಕರಿಸದೆ ಚರಂಡಿಗಳಿಗೆ ಬಿಡುಗಡೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿಯೇ ಕೆಲವು ಸಂಸ್ಥೆಗನ್ನು ನೇಮಿಸಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ನ್ಯಾಯಮಂಡಳಿ ಹಲವು ನಿರ್ದೇಶನಗಳನ್ನು ನೀಡಿದರೂ ಕೂಡ ಅವು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಎನ್‌ಜಿಟಿ ನೇಮಿಸಿದ್ದ ಸಮಿತಿಯೊಂದರ ಅಧ್ಯಯನ ವರದಿಯಿಂದ ಇದು ದೃಢಪಟ್ಟಿದೆ’ ಎಂದು ಪೀಠ ತಿಳಿಸಿದೆ.

‘ಎನ್‌ಒಐಡಿಎ ಕಾರ್ಯವೈಖರಿಯಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಕಂಡುಬಂದಿಲ್ಲ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ತನ್ನ ಅಧೀನಕ್ಕೊಳಪಟ್ಟಿರುವ ಎಲ್ಲಾ ಮಂಡಳಿಗಳಿಗೂ ಮಾಲಿನ್ಯ ನಿಯಂತ್ರಣ ಸಂಬಂಧ ಮುಂದಿನ ಎರಡು ತಿಂಗಳಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಬೇಕು’ ಎಂದು ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.