ADVERTISEMENT

ಮಹಾರಾಷ್ಟ್ರದಲ್ಲಿ ಯಡಿಯೂರಪ್ಪ ಭಾಷಣಕ್ಕೆ ಜನ ಬರ್ತಿದ್ರು, ಆದರೆ ಮತ ಹಾಕಲಿಲ್ಲ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 9:08 IST
Last Updated 25 ಅಕ್ಟೋಬರ್ 2019, 9:08 IST
   

ಬೆಂಗಳೂರು: ಕರ್ನಾಟಕಕ್ಕೆ ಹೊಂದಿಕೊಂಡಂತೆ ಇರುವ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವಲಿಂಗಾಯತ ಮತದಾರರನ್ನು ಓಲೈಸಲುಬಿಜೆಪಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನೆಚ್ಚಿಕೊಂಡಿತ್ತು. ಆದರೆ ಮಹಾರಾಷ್ಟ್ರದ ಫಲಿತಾಂಶ ಪ್ರಕಟವಾದ ನಂತರ ಯಡಿಯೂರಪ್ಪ ಅವರ ಪ್ರಭಾವ ಈ ಪ್ರದೇಶಗಳಲ್ಲಿ ಅಷ್ಟೇನೂ ಪ್ರಭಾವ ಬೀರಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ತಾರಾ ಪ್ರಚಾರಕನ ಸ್ಥಾನ ನೀಡಿತ್ತು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಂದಿಗೆ ಯಡಿಯೂರಪ್ಪ ಜತ್ತ, ಅಕ್ಕಲವಾಡಿ, ಸಾಂಗ್ಲಿ ಮತ್ತು ಕೊಲ್ಹಾಪುರ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದರು.

ಲಕ್ಷ್ಮಣ ಸವದಿ ಅವರಿಗೆ ಸಾಂಗ್ಲಿ ಮತ್ತು ಅಹಮದ್‌ನಗರ ಜಿಲ್ಲೆಗಳ ಉಸ್ತುವಾರಿಯನ್ನೂ ನೀಡಲಾಗಿತ್ತು. ಪ್ರತಿ ಜಿಲ್ಲೆಯಲ್ಲಿಯೂ ಅವರು ಒಂದು ವಾರಕ್ಕಿಂತಲೂ ಹೆಚ್ಚು ಸಮಯ ಕಳೆದು ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದರು.

ADVERTISEMENT

ಕೊಲ್ಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಜಯಗಳಿಸಿದ್ದು ಹೊರತುಪಡಿಸಿದರೆ, ಲಿಂಗಾಯತ ಪ್ರಾಬಲ್ಯ ಜಿಲ್ಲೆಗಳಲ್ಲಿ ಬಿಜೆಪಿ ಅಂಥ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಬಹುತೇಕ ಸ್ಥಾನಗಳು ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗಳ ಪಾಲಾಗಿವೆ.

ಮಹಾರಾಷ್ಟ್ರದ ಕೆಲ ಕ್ಷೇತ್ರಗಳಲ್ಲಿಯಡಿಯೂರಪ್ಪ ನಿರ್ಣಾಯಕ ಪಾತ್ರ ನಿರ್ವಹಿಸಿ, ಬಿಜೆಪಿಗೆ ಗೆಲುವು ದಕ್ಕಿಸಿಕೊಡುತ್ತಾರೆ ಎನ್ನುವ ನಿರೀಕ್ಷೆಗಳಿದ್ದವು. ಯಡಿಯೂರಪ್ಪ ಅವರ ಭಾಷಣಗಳಿಗೆ ಜನರು ದೊಡ್ಡ ಸಂಖ್ಯೆಯಲ್ಲಿಯೇ ಸೇರುತ್ತಿದ್ದರು. ಆದರೆ ಅವರ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗಲಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.