ಮುಂಬೈ: ಯೆಸ್ ಬ್ಯಾಂಕ್ ವಂಚನೆ ಪ್ರಕರಣದ ಸಂಬಂಧ ದಿವಾನ್ ಹೌಸಿಂಗ್ ಫೈನಾನ್ಸ್ ಸಂಸ್ಥೆ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ಬುಧವಾರ ತಿರಸ್ಕರಿಸಿತು.
ತನಿಖೆ ನಡೆಸುತ್ತಿರುವ ಸಿಬಿಐ ಸಂಸ್ಥೆಯು ವಿಶೇಷ ನ್ಯಾಯಾಲಯದ ಎದುರು ಆರೋಪಪಟ್ಟಿ ದಾಖಲಿಸುವಾಗ ಸಿಆರ್ಪಿಸಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಆಧಾರದಲ್ಲಿ ಜಾಮೀನು ಕೋರಿ ವಾಧ್ವಾನ್ ಸಹೋದರರು ಅರ್ಜಿ ಸಲ್ಲಿಸಿದ್ದರು.
ಇವರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಮಿತ್ ದೇಸಾಯಿ ಅವರು, ಸೆಕ್ಷನ್ 173 ಅನ್ವಯ ತನಿಖೆ ಪೂರ್ಣಗೊಂಡ ಸಂದರ್ಭದಲ್ಲಿಯಷ್ಟೇ ಕೋರ್ಟ್ ಆರೋಪಪಟ್ಟಿಯನ್ನು ಗಣನೆಗೆ ತೆಗೆದುಕೊಳ್ಳಬಹುದಾಗಿದೆ. ಈ ಪ್ರಕರಣದಲ್ಲಿ ತನಿಖೆಯು ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ, ಅರ್ಜಿದಾರರರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಅಲ್ಲದೆ, ವಿಚಾರಣೆಗಾಗಿ ವಾಧ್ವಾನ್ ಸಹೋದರರನ್ನು ವಶಕ್ಕೆ ಪಡೆಯುವ ಅಗತ್ಯವೂ ಇಲ್ಲ ಎಂದು ವಾದಿಸಿದರು. ಸಿಬಿಐ ಪರವಾಗಿ ಹಾಜರಿದ್ದ ಅನಿಲ್ ಸಿಂಗ್ ಅವರು, ಜಾಮೀನು ನೀಡುವುದಕ್ಕೆ ವಿರೋಧಿಸಿದರು. ಸಿಬಿಐ ಎಲ್ಲ ಅಗತ್ಯ ಮಾನದಂಡಗಳನ್ನು ಪಾಲಿಸಿದೆ ಎಂದು ವಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.