ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಡಲಿರುವ ಸಾಮರ್ಥ್ಯದ ಬಗ್ಗೆ ಬಿಜೆಪಿ ಶಾಸಕರು ಪ್ರಶ್ನೆ ಎತ್ತಿದ್ದಾರೆ.
ಕಡಿವಾಣವಿಲ್ಲದ ಅಧಿಕಾರಶಾಹಿ ಎಂದು ತಮ್ಮ ಸರ್ಕಾರವನ್ನೇ ಟೀಕಿಸಿರುವ ಶಾಸಕರು ಸಾಮಾನ್ಯ ಜನರಿಗೆ ಸಹಾಯ ನೀಡಿಎಂದು ಒತ್ತಾಯಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸುತ್ತಿದೆ ಎಂದು ವಿಪಕ್ಷದ ಆರೋಪಕ್ಕೆ ಬಿಜೆಪಿಯ ಹಿರಿಯ ನಾಯಕರೊಬ್ಬರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ತಾನು ಸರ್ಕಾರವನ್ನು ಪ್ರಶ್ನಿಸುವುದಾಗಿ ಶಾಸಕ ದೊಮನಿ ದ್ವಿವೇದಿ ಹೇಳಿದ್ದಾರೆ.
ಈ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೆ ತಲುಪಿದೆ ಎಂದು ಹರ್ದೋಯಿ ಜಿಲ್ಲೆಯ ಗೊಪಮು ಕ್ಷೇತ್ರದ ಶಾಸಕ ಶ್ಯಾಮ್ ಪ್ರಕಾಶ್ ಹೇಳಿದ್ದಾರೆ.ಪೂರಣ್ಪುರ್ ವಿಧಾನಸಭಾ ಕ್ಷೇತ್ರದ ಶಾಸಕ ಬಾಬುರಾಮ ಪಾಸ್ವಾನ್ ಕೂಡಾ ಇದೇ ರೀತಿಯ ಆರೋಪ ಮಾಡಿದ್ದಾರೆ.
ಈ ಸರ್ಕಾರಕ್ಕೆ ಅಧಿಕಾರಶಾಹಿ ಮೇಲೆ ಯಾವುದೇ ನಿಯಂತ್ರಣ ಇಲ್ಲ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಹೆದರದ ಕಾರಣ ಭ್ರಷ್ಟಾಚಾರ ಹೆಚ್ಚುತ್ತಾ ಹೋಗುತ್ತಿದೆ ಎಂದು ಶ್ಯಾಮ್ ಪ್ರಕಾಶ್ ಹೇಳಿದ್ದಾರೆ.
ಗುರುವಾರ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಅಧಿವೇಶನದ ವೇಳೆ ಸುಮಾರು 100 ಬಿಜೆಪಿ ಶಾಸಕರು ಸದನದ ಹೊರಗೆ ಪ್ರತಿಭಟನೆ ನಡೆಸಿದ್ದರು, ಪೊಲೀಸರ ನಡವಳಿಕೆಯನ್ನು ಖಂಡಿಸಿದ ಶಾಸಕರೊಬ್ಬರಿಗೆ ಸದನದಲ್ಲಿ ಮಾತನಾಡಲುಅವಕಾಶ ನೀಡಿಲ್ಲ ಎಂಬುದನ್ನು ಖಂಡಿಸಿ ಶಾಸಕರು ಈ ಪ್ರತಿಭಟನೆ ನಡೆಸಿದ್ದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ತಮ್ಮ ಸರ್ಕಾರ ಜನರಿಗಾಗಿಮಹತ್ತರ ಕಾರ್ಯಗಳನ್ನು ಮಾಡಿರುವುದು ಕಡಿಮೆ. ಸಹಜವಾಗಿ ಅವರು ಬೇಸರಗೊಂಡಿದ್ದಾರೆ. ಜನರ ಹಿತಕ್ಕಾಗಿ ಅವರು ಸದನದಲ್ಲಿ ದನಿಯೆತ್ತುವುದಾದರೆ ನಾವು ಬೆಂಬಲಿಸುತ್ತೇವೆ ಎಂದು ವಿಪಕ್ಷ ನೇತಾರ ರಾಮ್ ಗೋವಿಂದ್ ಚೌಧರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.