ADVERTISEMENT

ಉತ್ತರ ಪ್ರದೇಶ: ಯುವಕನಿಗೆ ಮುಳುವಾದ ಕೊಕ್ಕರೆ ಮೇಲಿನ ಅಕ್ಕರೆ

ಪಿಟಿಐ
Published 26 ಮಾರ್ಚ್ 2023, 15:52 IST
Last Updated 26 ಮಾರ್ಚ್ 2023, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೇಠಿ: ಸಾರಸ್‌ ಕೊಕ್ಕರೆಯೊಂದನ್ನು ರಕ್ಷಣೆ ಮಾಡಿ, ಅಕ್ಕರೆ ತೋರಿದ ಉತ್ತರ ಪ್ರದೇಶದ ಮಂದಖಾ ಗ್ರಾಮದ ಯುವಕನ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರಿಫ್‌ ಖಾನ್‌ ಗುರ್ಜಾರ್‌ ಎಂಬಾತನ ಜೊತೆ ಕುಟುಂಬ ಸದಸ್ಯನಂತೆ ಕಳೆದಿದ್ದ ಕೊಕ್ಕರೆಯನ್ನು ಅಧಿಕಾರಿಗಳು ಮಾರ್ಚ್‌ 21 ರಂದು ವಶಕ್ಕೆ ಪಡೆದು, ರಾಯ್‌ಬರೇಲಿಯಲ್ಲಿರುವ ಸಮಸ್ಪುರ ಅಭಯಾರಣ್ಯಕ್ಕೆ ಸ್ಥಳಾಂತರಿಸಿದ್ದಾರೆ.

ಸಾರಸ್‌ ಕೊಕ್ಕರೆಯೊಂದಿಗಿನ ಸ್ನೇಹದಿಂದ ಆರಿಫ್‌ ಖಾನ್‌ ಪ್ರಸಿದ್ಧರಾಗಿದ್ದು, ಈ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದಿತ್ತು.

ADVERTISEMENT

ವರ್ಷದ ಹಿಂದೆ ಕಾಲಿಗೆ ಗಾಯಗೊಂಡ ಸ್ಥಿತಿಯಲ್ಲಿದ್ದ ಕೊಕ್ಕರೆಯನ್ನು ಆರಿಫ್‌ ಅವರು ಆರೈಕೆ ಮಾಡಿದ್ದರು. ಬಳಿಕ ಅದು ಅವರನ್ನು ಬಿಟ್ಟು ತೆರಳಲಿಲ್ಲ. ಎಲ್ಲಿ ಹೋದರೂ ಹಿಂಬಾಲಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಕಚೇರಿಗೆ ಬಂದು ಹೇಳಿಕೆ ನೀಡುವಂತೆ ಅರಣ್ಯ ಅಧಿಕಾರಿಗಳು ಆರಿಫ್‌ ಖಾನ್‌ಗೆ ನೋಟಿಸ್‌ ನೀಡಿದ್ದಾರೆ.

‘ಸಾರಸ್‌ ಕೊಕ್ಕರೆಯು ಸದಾ ಜೋಡಿಯಾಗಿ ವಾಸಿಸುವ ಪಕ್ಷಿಯಾಗಿದ್ದು, ಅದರ ಯೋಗಕ್ಷೇಮದ ಬಗ್ಗೆ ನಮಗೆ ಆತಂಕವಿತ್ತು' ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಅಧಿಕಾರಿಗಳ ನಡೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಖಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.