ಬೆಂಗಳೂರು: ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಅಂಬರೀಷ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದ ವಿಕ್ರಂ ಆಸ್ಪತ್ರೆಯ ವೈದ್ಯರಾದ ಡಾ.ಕೆ.ಎಸ್.ಸತೀಶ್ ಹಾಗೂ ಡಾ.ರಘುನಂದನ್ ಸೋಮವಾರ ನಗರಕ್ಕೆ ಹಿಂತಿರುಗಿದ್ದು, ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಡಾ.ಕೆ.ಎಸ್.ಸತೀಶ್, ‘ಅಂಬರೀಷ್ ಅವರ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಂಡುಬಂದಿದ್ದು, ಆತಂಕ ಪಡುವ ಅಗತ್ಯವಿಲ್ಲ’ ಎಂದರು.
‘ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಶ್ವಾಸಕೋಶತಜ್ಞ ಡಾ.ಆಂಗ್ ನೇತೃತ್ವದ ವೈದ್ಯರ ತಂಡವು ಅಂಬರೀಷ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಸಿಂಗಪುರ ಸರ್ಕಾರವು ಉತ್ತಮ ಸಹಕಾರ ನೀಡುತ್ತಿದೆ’ ಎಂದು ಹೇಳಿದರು.
ಕೃತಕ ಉಸಿರಾಟ ಸಾಧನ ಸದ್ಯಕ್ಕೆ ತೆಗೆಯಲ್ಲ: ‘24 ಗಂಟೆಗಳ ಕಾಲ ನಿಗಾ ಇರಿಸಿ ಅಂಬರೀಷ್ ಅವರ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಕೆ ಇದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವುದರಿಂದ ಸದ್ಯಕ್ಕೆ ಕೃತಕ ಉಸಿರಾಟದ ಸಾಧನವನ್ನು ತೆಗೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ದ್ರವರೂಪದ ಆಹಾರವನ್ನೇ ನೀಡಲಾಗುತ್ತಿದೆ. ಚಿಕಿತ್ಸೆ ಪೂರ್ಣಗೊಂಡು ಸಂಪೂರ್ಣ ಚೇತರಿಸಿಕೊಳ್ಳಲು 15 ದಿನಗಳಾದರೂ ಬೇಕಾಗಬಹುದು. ಆದರೆ, ಸಿಂಗಪುರದಿಂದ ಅಂಬರೀಷ್ ಹಿಂತಿರುಗುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
ಸ್ವಲ್ಪ ಹೆದರಿಕೆಯಿತ್ತು: ‘ನಗರದಿಂದ ಸಿಂಗಪುರಕ್ಕೆ ನಾಲ್ಕು ಗಂಟೆಯ ಪ್ರಯಾಣವಾದ್ದರಿಂದ ವಿಶೇಷ ವಿಮಾನದಲ್ಲಿ ಅಂಬರೀಷ್ ಅವರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸ್ವಲ್ಪ ಹೆದರಿಕೆಯಿತ್ತು’ ಎಂದು ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.