ADVERTISEMENT

ಅನಿಲ್ ಕುಂಬ್ಳೆ ಆಯ್ಕೆ ಪ್ರಶ್ನಿಸಿ ಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:35 IST
Last Updated 15 ಫೆಬ್ರುವರಿ 2011, 18:35 IST

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕ್ರಿಕೆಟ್‌ಪಟು ಅನಿಲ್ ಕುಂಬ್ಳೆ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದನ್ನು ಪ್ರಶ್ನಿಸಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಸಂಸ್ಥೆಯ ಸದಸ್ಯ ರಾಮಮೂರ್ತಿ ಅವರು ಅರ್ಜಿ ಸಲ್ಲಿಸಿದ್ದು, ಕುಂಬ್ಳೆ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸುವಂತೆ ಕೋರಿದ್ದಾರೆ. ಆದರೆ ಈ ಹಂತದಲ್ಲಿ ತಡೆ ನೀಡದ ಕೋರ್ಟ್, ವಿವಾದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕುಂಬ್ಳೆ ಅವರಿಗೆ ಮಂಗಳವಾರ ಸೂಚಿಸಿದೆ.

ಸಂಸ್ಥೆಯ ನಿಯಮ ಉಲ್ಲಂಘಿಸಿ ಇವರ ನೇಮಕಾತಿ ನಡೆದಿದೆ ಎನ್ನುವುದು ಅರ್ಜಿದಾರರ ದೂರು. ಸಂಸ್ಥೆಯ ಕಾಯ್ದೆಯ 7(ಡಿ) ನಿಯಮದ ಪ್ರಕಾರ ಕ್ರಿಕೆಟ್ ಆಟಗಾರರು, ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಎರಡು ವರ್ಷಗಳ ತರುವಾಯ ಮಾತ್ರ ಸಂಘದ ಸದಸ್ಯರಾಗಿ ನೇಮಕಗೊಳ್ಳಲು ಅರ್ಹರು.

 ಆದರೆ ಕುಂಬ್ಳೆ ಅವರನ್ನು ಚುನಾವಣೆಗೆ ನಿಲ್ಲಿಸಲು ಸಂಘದ ಆಗಿನ ಕಾರ್ಯದರ್ಶಿಯಾಗಿದ್ದ ಬ್ರಿಜೆಶ್ ಪಟೇಲ್ ಅವರು ಈ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಕೋರಿ ತರಾತುರಿಯಲ್ಲಿ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಿಗೆ ಕಳುಹಿಸಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ಕೂಡಲೇ ಸಂಘದ ಸದಸ್ಯರಾಗಬಹುದು ಎಂಬ ಬಗ್ಗೆ ತಿದ್ದುಪಡಿ ಮಾಡುವಂತೆ ಇದರಲ್ಲಿ ಕೋರಲಾಗಿದೆ.

ಆದರೆ ಅದು ಇನ್ನೂ ಪರಿಶೀಲನಾ ಹಂತದಲ್ಲಿ ಇರುವಾಗಲೇ ಚುನಾವಣೆ ನಡೆದು ಕುಂಬ್ಳೆ ಆಯ್ಕೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಯ್ಕೆ ಕಾನೂನು ಬಾಹಿರ ಎನ್ನುವುದು ಅರ್ಜಿದಾರರ ದೂರು. ವಿಚಾರಣೆಯನ್ನು ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.