ಕೊಪ್ಪಳ: ಕಳೆದ ಸೆ. 20ರಂದು ನಡೆದ ಎರಡನೇ ಹಂತದ ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಚುನಾವಣಾ ವೆಚ್ಚ ವಿವರಗಳಲ್ಲಿ ಸಾಕಷ್ಟು ನ್ಯೂನತೆಗಳು ಕಂಡು ಬಂದಿವೆ. ಹೀಗಾಗಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯ ಸಂಗಣ್ಣ ಕರಡಿ, ಜೆಡಿಎಸ್ನ ಪ್ರದೀಪಗೌಡ ಮಾಲಿಪಾಟೀಲ ಹಾಗೂ ಕಾಂಗ್ರೆಸ್ನ ಕೆ.ಬಸವರಾಜ ಹಿಟ್ನಾಳ್ ಅವರು ಸಲ್ಲಿಸಿರುವ ಚುನಾವಣಾ ವೆಚ್ಚದ ವಿವರಗಳು ಸಮರ್ಪಕವಾಗಿಲ್ಲ. ಅಲ್ಲದೇ ಚುನಾವಣಾ ವೀಕ್ಷಕರು (ವೆಚ್ಚ) ಸಿದ್ಧಪಡಿಸಿರುವ ದಾಖಲೆಗಳಿಗೂ, ಅಭ್ಯರ್ಥಿಗಳು ಸಲ್ಲಿಸಿರುವ ವಿವರಗಳು ತಾಳೆ ಹೊಂದುತ್ತಿಲ್ಲ. ಹೀಗಾಗಿ ಈ ಬಾರಿಯೂ ಮೂವರು ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಈ ಹಿಂದೆ ಮೊದಲ ಹಂತದ ಪರಿಶೀಲನೆಗಾಗಿ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಲು ವಿಫಲರಾಗಿದ್ದ ಮೂವರು ಪಕ್ಷೇತರ ಅಭ್ಯರ್ಥಿಗಳು ಈ ಬಾರಿಯೂ ವಿವರಗಳನ್ನು ಸಲ್ಲಿಸಿಲ್ಲ. ಕಣದಿಂದ ಹಿಂದಕ್ಕೆ ಸರಿದು ಜೆಡಿಎಸ್ಗೆ ಬೆಂಬಲ ಸೂಚಿಸಿದ್ದರೂ ವೆಚ್ಚವನ್ನು ಸಲ್ಲಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಕರಾಟೆ ಮೌನೇಶ್ಗೆ ಸೇರಿದಂತೆ ಈ ನಾಲ್ವರು ಪಕ್ಷೇತರರಿಗೆ ಸಹ ನೊಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.