ಮಂಗಳೂರು: ಎತ್ತಿನ ಹೊಳೆ ಯೋಜನೆ ಯಿಂದಾಗಿ ಪಶ್ಚಿಮ ಘಟ್ಟದಲ್ಲಿ ನಾಶ ವಾಗಲಿರುವ ಅರಣ್ಯ ಪ್ರದೇಶದ ಪ್ರಮಾಣವನ್ನು ಕರ್ನಾಟಕ ನೀರಾವರಿ ನಿಗಮ ಇನ್ನೂ ಅಂದಾಜು ಮಾಡಿಲ್ಲ.
‘ವಿವರವಾದ ಯೋಜನಾ ವರದಿ’ ಯನ್ನು ನೀರಾವರಿ ನಿಗಮ ಇನ್ನೂ ತಯಾರಿಸಿಲ್ಲ. ಯೋಜನೆಗೆ ಸಂಬಂಧಿಸಿ ಸಮೀಕ್ಷೆ ಕಾರ್ಯಗಳು ನಡೆಯದೇ ಇರುವುದರಿಂದ ಘಟ್ಟಪ್ರದೇಶದಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶವೆಷ್ಟು ಎಂಬುದು ಸ್ಪಷ್ಟವಿಲ್ಲ ಎಂದು ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರ್ಟಿಐ ಕಾರ್ಯಕರ್ತ ಎಚ್. ಸುಂದರ್ ್ ರಾವ್ ಅವರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ, ಅರಣ್ಯ ಪ್ರದೇಶದ ಮೇಲಾಗುವ ಹಾನಿಯನ್ನು ಇನ್ನೂ ಅಂದಾಜಿಸಿಲ್ಲ. ಎತ್ತಿನ ಹೊಳೆ ಯೋಜನೆಯಿಂದ ಪರಿಸರದ ಮೇಲಾಗುವ ಅಥವಾ ಆ ಪ್ರದೇಶದ ಜನಜೀವನದ ಮೇಲಾಗುವ ಪರಿಣಾಮಗಳ ಅಧ್ಯಯನ ಇನ್ನೂ ನಡೆದಿಲ್ಲ ಎಂದು ನೀರಾವರಿ ನಿಗಮದ ಅಧಿಕಾರಿಗಳು ಉತ್ತರಿಸಿದ್ದಾರೆ.
ಅಲ್ಲದೆ, ನೀರಾವರಿ ನಿಗಮವು ಈಗಾಗಲೇ ‘ಪಶ್ಚಿಮದ ಸಕಲೇಶಪುರದಿಂದ 24.01 ಟಿಎಂಸಿ ಅಡಿ ನೆರೆ ನೀರನ್ನು ಪೂರ್ವದ ಕೋಲಾರ, ಚಿಕ್ಕ ಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಯೋಜನೆ’ ಎಂಬ ಹೆಸರಿನಲ್ಲಿ ವರದಿ ಯೊಂದನ್ನು ಸಿದ್ಧಪಡಿಸಿದ್ದು ಆ ವರದಿ ಯಲ್ಲಿಯೂ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯದ ಮೇಲಾಗುವ ಪರಿಣಾ ಮಗಳ ಬಗ್ಗೆಯಾಗಲೀ, ಯೋಜನೆಗಾಗಿ ನಾಶವಾಗುವ ಪರಿಸರದ ಕುರಿತಾಗಲೀ ಯಾವುದೇ ಪ್ರಸ್ತಾವ ಇಲ್ಲ.
ನೀರಾವರಿ ನಿಗಮದ ವರದಿ ಪ್ರಕಾರ, ಎರಡು ಹಂತಗಳಲ್ಲಿ ಯೋಜನೆ ಜಾರಿಯಾಗಲಿದೆ. ಮೊದಲ ಹಂತದಲ್ಲಿ ಐದು ಒಡ್ಡುಗಳ ನಿರ್ಮಾಣ ಹಾಗೂ ಎರಡನೇ ಹಂತದಲ್ಲಿ ಮೂರು ಒಡ್ಡುಗಳ ನಿರ್ಮಾಣವಾಗಲಿದೆ. ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿಯೇ ಒಂದು ಮತ್ತು ಎರಡನೇ ಒಡ್ಡುಗಳ ನಿರ್ಮಾಣವಾಗಲಿದೆ. ರಕ್ಷಿದಿ ಬಳಿಯ ಕುಂಬರಡಿಯಲ್ಲಿ (ಹಾರ್ಲೆ ಎಸ್ಟೇಟ್ ಬಳಿ) ಮೂರನೇ ಒಡ್ಡು, ಕಾಡುಮನೆ ಹೊಳೆಯ ಬಳಿ ನಾಲ್ಕು ಮತ್ತು ಐದನೇ ಒಡ್ಡು, ಕಡುವರಳ್ಳಿಗೆ ಸಾಗುವ ದಾರಿಯಲ್ಲಿ ಕೇರಿಹೊಳೆಯಲ್ಲಿ 6ನೇ ಒಡ್ಡು, ಹೊಸಳ್ಳಿ ಬೆಟ್ಟಕ್ಕೆ ಅಡ್ಡಲಾಗಿ ಹೊಂಗಡಹಳ್ಳದಲ್ಲಿ 7ನೇ ಒಡ್ಡು ನಿರ್ಮಾಣ ಹಾಗೂ ಮಾರನಹಳ್ಳಿಯ ಬಳಿ ಎತ್ತಿನ ಹೊಳೆಯಲ್ಲಿ 8ನೇ ಒಡ್ಡು ರಚಿಸಲಾಗುವುದು.
ಈ ಪೈಕಿ ಕೇರಿ ಹೊಳೆ ಎಂದು ಗುರುತಿಸಿಕೊಳ್ಳುವ ಹಳ್ಳ ‘ಕೆಂಚನ ಕುಮೇರಿ’ಯ ದಟ್ಟ ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಸದಾ ಆನೆದಾಳಿಗೆ ತುತ್ತಾಗುವ ಅಲುವಳ್ಳಿ ಮತ್ತು ಕಡುವರಳ್ಳಿ ಇದೇ ಪುಟ್ಟ ಹೊಳೆ ದಂಡೆ ಮೇಲಿದೆ. ಕೇರಿಹೊಳೆಯ ದಂಡೆಯುದ್ದಕ್ಕೂ ಆನೆಗಳ ಆಹಾರವಾದ ಬಿದಿರು ಜಾತಿಗೆ ಸೇರಿದ ‘ವಾಟೆ’ ಸಮೃದ್ಧವಾಗಿದೆ. ಈ ಹೊಳೆಯನ್ನು ಆಶ್ರಯಿಸಿ ಅಲುವಳ್ಳಿ ಮತ್ತು ಕಡುವರಳ್ಳಿಯ ಆಸುಪಾಸಿನ ಜನವಸತಿ ಇದೆ.
********
‘ಪರಿಸರ ಪರಿಣಾಮ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆಯೂ ಎತ್ತಿನ ಹೊಳೆ ಯೋಜನೆ ಅತ್ಯಂತ ಸೂಕ್ತ’ ಎಂಬ ಒಂದು ಸಾಲಿನ ಉಲ್ಲೇಖವಷ್ಟೆ ವರದಿಯಲ್ಲಿದೆ. ಅಂದರೆ ಜೀವ ವೈವಿಧ್ಯತೆಗೆ ಜಗತ್ತಿನಲ್ಲಿಯೇ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟದ ಮೇಲೆ ಯೋಜನೆಯಿಂದ ಆಗುವ ಪರಿಣಾಮಗಳ ಅಧ್ಯಯನ ಅಗತ್ಯವಿಲ್ಲವೇ? ಅರಣ್ಯದ ಹಾನಿ ಅಂದಾಜು ಮಾಡುವ ಉತ್ಸಾಹ ಯಾರಿಗೂ ಇದ್ದಂತಿಲ್ಲ. ನಿಗಮ ಸಿದ್ಧ ಪಡಿಸಲಿರುವ ಡಿಪಿಆರ್ನಲ್ಲಾದರೂ ಆ ಬಗ್ಗೆ ವಿವರಗಳು ಇರಬಹುದು ಎಂಬ ನಿರೀಕ್ಷೆ ನಮ್ಮದು.
– ಹೆಮ್ಮಿಗೆ ಮೋಹನ್
ಪರಿಸರವಾದಿ, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.