ಬೆಂಗಳೂರು: ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಸಭಾಪತಿಯಾಗಿ ಡಿ.ಎಚ್. ಶಂಕರಮೂರ್ತಿ ಅವರೇ ಮುಂದುವರಿಯಲಿದ್ದಾರೆ.
ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪರ 36 ಮತ, ನಿರ್ಣಯದ ವಿರುದ್ಧ (ಶಂಕರಮೂರ್ತಿ ಅವರ ಪರ) 37 ಮತ ಚಲಾವಣೆಯಾಗಿವೆ. ಇದರೊಂದಿಗೆ ಆಡಳಿತ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ.
ಶಂಕರಮೂರ್ತಿ ಅವರನ್ನು ಬೆಂಬಲಿಸುವ ಸಂಬಂಧ ಮಂಗಳವಾರ ಜೆಡಿಎಸ್ ಗೊಂದಲದಲ್ಲಿತ್ತು. ಆದರೆ, ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ‘ಶಂಕರಮೂರ್ತಿ ಅವರನ್ನು ಬೆಂಬಲಿಸಲು ನಮ್ಮ ಪಕ್ಷ ತೀರ್ಮಾನಿಸಿದೆ’ ಎಂದು ಬುಧವಾರ ತಿಳಿಸಿದ್ದರು. ಅದರಂತೆ, ಗುರುವಾರ ಜೆಡಿಎಸ್ನ ವಿಧಾನಪರಿಷತ್ ಸದಸ್ಯರು ಶಂಕರಮೂರ್ತಿ ಅವರ ಪರ ಮತ ನೀಡಿ ಬೆಂಬಲಿಸಿದ್ದರು.
ಅಭಿನಂದನೆ ಹೇಳಿದ ಶಂಕರಮೂರ್ತಿ
ನನ್ನ ಪರ ಮತ ಹಾಕಿದ ಸದಸ್ಯರಿಗೆ ಧನ್ಯವಾದಗಳು. ಪರವಾಗಿ ಮತ ನೀಡಿದ ಜೆಡಿಎಸ್ನ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ಸದಸ್ಯರಿಗೆ ಅಭಿನಂದನೆಗಳು ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
ಅವಿಶ್ವಾಸ ನಿರ್ಣಯ ಪ್ರಸ್ತಾಪ ಆದ ಮೊದಲ ದಿನವೇ ನನಗೆ ಬೆಂಬಲ ನೀಡುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.
ನನ್ನ ವಿರುದ್ಧ ದಾಖಲೆ ಇಲ್ಲದೆ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡಿತ್ತು. ಉಗ್ರಪ್ಪ ಅವರು ಆಧಾರ ರಹಿತ ಆರೋಪ ಮಾಡಿದ್ದರು ಎಂದು ಶಂಕರಮೂರ್ತಿ ಅವರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.