ADVERTISEMENT

ಆಂಧ್ರಕ್ಕೆ ಅದಿರು ಅಕ್ರಮ ಸಾಗಾಟ: 6 ಲಾರಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಸಂಡೂರು: ಇಲ್ಲಿನ ಅರಣ್ಯ ವಲಯದಿಂದ ದಿಬ್ಬಲದಿನ್ನಿ ಪ್ರದೇಶದ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಸುಮಾರು 120 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಅಕ್ರಮ ಅದಿರನ್ನು ಆರು ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಈ ಲಾರಿ ಚಾಲಕರನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತಾ.18ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ ಗುರುವಾರ ಈ ವಿಷಯ ತಿಳಿಸಿದ್ದಾರೆ.

‘ದಿಬ್ಬಲದಿನ್ನಿ ಪ್ರದೇಶದಲ್ಲಿ ಕಳ್ಳದಾರಿ ಬಳಸಿಕೊಂಡು ಅದಿರು ಸಾಗಿಸುವ ಲಾರಿಗಳ ಮೇಲೆ ಜ.17ರ ರಾತ್ರಿ ದಾಳಿ ನಡೆಸಲಾಗಿತ್ತು. ವಿಠ್ಠಲಾಪುರ ಹೊರಭಾಗದಲ್ಲಿ ಅದಿರು ತಪಾಸಣೆ ಠಾಣೆಯಿದ್ದು,  ದಿಬ್ಬಲದಿನ್ನಿಯಲ್ಲಿ ತಾತ್ಕಾಲಿಕವಾಗಿ ಖನಿಜ ತನಿಖಾ ಠಾಣೆಯೊಂದನ್ನು ತೆರೆಯಲಾಗಿದೆ. ಸಂಚಾರಿ ವಿಚಕ್ಷಣಾ ದಳದ ಓಡಾಟ ಚುರುಕುಗೊಳಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

ಈ ಕಾರ್ಯಾಚರಣೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಕುರೇರಾ, ಉಪವಿಭಾಗಾಧಿಕಾರಿ ವೆಂಕಟೇಶ, ಎಸಿಎಫ್ ಪೂವಯ್ಯ, ಪಿಎಸ್‌ಐ ಉಮೇಶ್ ನೇತೃತ್ವದಲ್ಲಿ ನಡೆದಿತ್ತು.ತಾಲೂಕಿನ ಬನ್ನಿಹಟ್ಟಿ ಅದಿರು ತಪಾಸಣೆ ಠಾಣೆಯನ್ನು ತಪ್ಪಿಸಿಕೊಂಡು ಲಿಂಗದಹಳ್ಳಿ, ಮೆಟ್ರಿಕ್ಕಿ ಮಾರ್ಗವಾಗಿ ರಾಜಾಪುರ, ಗಂಗಲಾಪುರ, ದಿಬ್ಬಲದಿನ್ನಿ ಮೂಲಕ ಆಂಧ್ರಕ್ಕೆ ಅಕ್ರಮ ಲಾರಿಗಳು ಓಡಾಡುತ್ತಿವೆ ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.