ADVERTISEMENT

ಆರೋಗ್ಯದ ಹಕ್ಕು ಜಾರಿ ಅಗತ್ಯ- ನ್ಯಾ. ಪಾಟೀಲ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ದಾವಣಗೆರೆ: ಶಿಕ್ಷಣ ಹಕ್ಕು ಮಾದರಿಯಲ್ಲಿಯೇ ಜನರಿಗೆ ಆರೋಗ್ಯದ  ಹಕ್ಕು ಜಾರಿಯಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ವಿ. ಪಾಟೀಲ್ ಅವರು ಗುರುವಾರ ಒತ್ತಾಯಿಸಿದರು.

ಇಲ್ಲಿನ ಎಸ್‌ಎಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಸ್‌ಎಸ್ ನಾರಾಯಣ ಹೃದಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನರು ಸೂಕ್ತ ಆರೋಗ್ಯ ಸೌಲಭ್ಯ ಸಿಗದೇ ಸದ್ದಿಲ್ಲದೇ ಸಾಯುತ್ತಿದ್ದಾರೆ. ಮೂಲ ಅನಾರೋಗ್ಯದ ಕಾರಣವೇ ಗೊತ್ತಾಗುವುದಿಲ್ಲ. ಆದ್ದರಿಂದ ಅದನ್ನು ಹಕ್ಕು ರೂಪದಲ್ಲಿ ಜಾರಿಗೆ ತರಬೇಕು ಎಂದರು.

ದೇಶದಲ್ಲಿ ಈಗ ಲಭ್ಯವಿರುವ ಸೀಟುಗಳಿಗಿಂತ ಹೆಚ್ಚಾಗಿ 16 ಸಾವಿರ ಎಂಬಿಬಿಎಸ್, 22 ಸಾವಿರ ಸ್ನಾತಕೋತ್ತರ ಸೀಟುಗಳಿಗೆ ಬೇಡಿಕೆಯಿದೆ. ವಿಶೇಷವಾಗಿ ಸ್ನಾತಕೋತ್ತರ ಪದವೀಧರರು ಹೆಚ್ಚಾಗಬೇಕು. ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಸೀಟುಗಳ ಸಂಖ್ಯೆ, ದಾಖಲಾತಿ ಹೆಚ್ಚಿಸಬೇಕು. ಅದಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿ ತನ್ನ ಕಾನೂನು ತೊಡಕುಗಳನ್ನು ನಿವಾರಿಸಿ ಅಧ್ಯಯನಕ್ಕೆ ಅವಕಾಶ ಕೊಡಬೇಕು ಎಂದು ಹೇಳಿದರು.

ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ಆರೋಗ್ಯದ ಹಕ್ಕನ್ನು ಕಾನೂನಾಗಿ ಜಾರಿಗೆ ತಂದರೆ ರೋಗಿಗೆ ತಾನು ಉತ್ತಮ ಆರೋಗ್ಯ ಸೌಲಭ್ಯ ಕೇಳುವ ಹಕ್ಕು ಬರುತ್ತದೆ. ಸೇವೆ ಒದಗಿಸಲು ತಪ್ಪಿದ್ದಲ್ಲಿ ಸಂಬಂಧಿತ ಆಸ್ಪತ್ರೆ ಹೊಣೆಯಾಗಬೇಕಾಗುತ್ತದೆ. ಆಗ ಸರ್ಕಾರಿ ಆಸ್ಪತ್ರೆಗಳೂ ಅವ್ಯವಸ್ಥೆಯಿಂದ ಹೊರಬಂದು ಸಾಕಷ್ಟು ಸದೃಢಗೊಳ್ಳುತ್ತವೆ ಎಂದರು.

ನಾವು ಮೊಬೈಲ್ ಬಳಸಲು ಕನಿಷ್ಠ ತಿಂಗಳಿಗೆ 150 ರೂಪಾಯಿಯನ್ನಾದರೂ ವೆಚ್ಚ ಮಾಡುತ್ತೇವೆ. ಅದರಲ್ಲಿ ತಲಾ 10 ರೂಪಾಯಿಯನ್ನು ಆರೋಗ್ಯ ಸೇವೆಗೆ ಮೀಸಲಿರಿಸಿದರೂ  ಸಾಕಷ್ಟು ಮೊತ್ತ ಲಭ್ಯವಾಗುತ್ತದೆ. ಅದರಿಂದ ಅತ್ಯುತ್ತಮ ಆರೋಗ್ಯ ಸೇವೆ ನೀಡಬಹುದು. ಈ ಬಗ್ಗೆ ಕೇಂದ್ರ ಯೋಜನಾ ಆಯೋಗಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಮೈಸೂರಿನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇಲ್ಲಿ ರೋಗಿಯ ಸಂಗಾತಿಗೆ ಆರೈಕೆ ಬಗ್ಗೆ ತರಬೇತಿ ನೀಡಿ ಅವರಿಂದಲೇ ನಿರ್ವಹಣೆ ಮಾಡಿಸಲಾಗುತ್ತದೆ. ಸ್ಟ್ಯಾನ್‌ಫೋರ್ಡ್ ವಿವಿ ಜತೆ ಜಂಟಿಯಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುವು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.