ಮೈಸೂರು: ಮೈಸೂರಿನಲ್ಲಿ ನ. 24ರಿಂದ 26ರ ವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ವಸತಿ ಸೌಲಭ್ಯ ನೀಡಲು ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಮುಂದಾಗುತ್ತಿಲ್ಲ.
‘ಸಮ್ಮೇಳನದ ವಿವಿಧ ಗೋಷ್ಠಿಗಳಿಗೆ ವಿವಿಧೆಡೆಗಳಿಂದ ಬರುವ ಗಣ್ಯರಿಗೆ ಹೋಟೆಲ್, ಅತಿಥಿಗೃಹಗಳಲ್ಲಿ ವಸತಿ ಸೌಲಭ್ಯ ನೀಡುವುದರ ಬದಲಾಗಿ ಸಾಹಿತಿಗಳೇ ತಮ್ಮ ಮನೆಗಳಲ್ಲಿ ಅತಿಥಿಗಳನ್ನು ಉಳಿಸಿಕೊಳ್ಳುತ್ತಾರೆ’ ಎಂದು ಸಾಹಿತಿಗಳೇ ಸಮ್ಮೇಳನ ಆಯೋಜಕರಿಗೆ ಸಲಹೆ ನೀಡಿದ್ದರು.
ಗೋಷ್ಠಿಗಳಲ್ಲಿ ಭಾಗವಹಿಸುವ ಗಣ್ಯರಿಗೆ ಐಷಾರಾಮಿ ಹೋಟೆಲ್ಗಳಲ್ಲಿ ವಸತಿ ಸೌಲಭ್ಯ ನೀಡಲಾಗುತ್ತದೆ. ಇದರಿಂದ ಕಸಾಪ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ. ಮನೆಗಳಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಿದರೆ ಈ ಹೊರೆಯನ್ನು ತಪ್ಪಿಸಬಹದು ಎಂದು ಸಾಹಿತಿಗಳ ಮನೆಗಳಲ್ಲೇ ವಸತಿ ಸೌಲಭ್ಯ ಕಲ್ಪಿಸಲು ಸಂಘಟಕರು ನಿರ್ಧರಿಸಿದ್ದರು. ಆದರೆ, ಈವರೆಗೂ ಕೇವಲ 9 ಮಂದಿ ತಮ್ಮ ಮನೆಗಳಲ್ಲಿ ಅತಿಥಿಗಳನ್ನು ಉಳಿಸಿಕೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಊಟದ ವ್ಯವಸ್ಥೆ: ‘ಅತಿಥಿಗಳನ್ನು ಮನೆಗಳಲ್ಲೇ ಉಳಿಸಿಕೊಂಡರೂ ಊಟದ ವ್ಯವಸ್ಥೆ ಮಾಡಬೇಕಿಲ್ಲ. ಸಮ್ಮೇಳನ ನಡೆಯುವ ಸ್ಥಳದಲ್ಲೇ ತಿಂಡಿ, ಊಟದ ವ್ಯವಸ್ಥೆ ಮಾಡಲಾಗುತ್ತದೆ. ಕೇವಲ ವಸತಿ ಸೌಲಭ್ಯ ನೀಡಿದರೆ ಸಾಕು ಎಂದರೂ ಸಾಹಿತಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.
‘ಕನಿಷ್ಠ 50 ಮನೆಗಳು ಬೇಕಾಗಬಹುದು ಎಂದು ಅಂದಾಜಿಸಿದ್ದೆವು. ಮುಂದಿನ ದಿನಗಳಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು ಮುಂದಾಗದಿದ್ದರೆ ಪರ್ಯಾಯ ಮಾರ್ಗ ಹುಡುಕಲಾಗುವುದು. ಹೋಟೆಲ್ಗಳಲ್ಲೇ ವಸತಿ ಸೌಲಭ್ಯ ಕಲ್ಪಿಸಬೇಕಾಗುತ್ತದೆ’ ಎಂದು ಹೇಳಿದರು.
* ಅತಿಥಿ ಸತ್ಕಾರ ಮಾಡುವಂತೆ ಸಾಹಿತಿಗಳೇ ಸಲಹೆ ನೀಡಿದ್ದರು. ಈಗ ಅವರಿಂದಲೇ ಆಸಕ್ತಿ ವ್ಯಕ್ತವಾಗಿಲ್ಲ. ನೋಂದಣಿಯ ವೇಗ ಸಾಲದು
–ಡಾ.ವೈ.ಡಿ.ರಾಜಣ್ಣ, ಅಧ್ಯಕ್ಷ, ಕಸಾಪ ಜಿಲ್ಲಾ ಘಟಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.