ADVERTISEMENT

ಇದು ಅಂತರಂಗದ ಸ್ವಚ್ಛತಾ ಅಭಿಯಾನ

ಶಂಕರ ಭಾರತೀ ಸ್ವಾಮೀಜಿ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಬೆಂಗಳೂರಿನಲ್ಲಿ ಭಾನುವಾರ ವೇದಾಂತ ಭಾರತೀ ಆಯೋಜಿಸಿದ್ದ ‘ದಶಮಃ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ’ ಕಾರ್ಯಕ್ರಮದಲ್ಲಿ ಶಂಕರಭಾರತೀ ಸ್ವಾಮೀಜಿ ದಕ್ಷಿಣಾಮೂರ್ತಿ ಹಾಗೂ ಶಾರದಾಂಬಾ ಚಿತ್ರಪಟಗಳಿಗೆ ಪೂಜೆ ಸಲ್ಲಿಸಿದರು  –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.
ಬೆಂಗಳೂರಿನಲ್ಲಿ ಭಾನುವಾರ ವೇದಾಂತ ಭಾರತೀ ಆಯೋಜಿಸಿದ್ದ ‘ದಶಮಃ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ’ ಕಾರ್ಯಕ್ರಮದಲ್ಲಿ ಶಂಕರಭಾರತೀ ಸ್ವಾಮೀಜಿ ದಕ್ಷಿಣಾಮೂರ್ತಿ ಹಾಗೂ ಶಾರದಾಂಬಾ ಚಿತ್ರಪಟಗಳಿಗೆ ಪೂಜೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು: ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಬಾಹ್ಯ ಸ್ವಚ್ಛತೆಗೆ ದೊಡ್ಡ ಆಂದೋಲನ ನಡೆಸುತ್ತಿದ್ದರೆ, ನಮ್ಮ ವೇದಾಂತ ಭಾರತೀ ಸಂಸ್ಥೆಯು ಸೌಂದರ್ಯ ಲಹರೀ ಪಾರಾಯಣ ಆಂದೋಲನದ ಮೂಲಕ ಜನರ ಅಂತರಂಗ ಸ್ವಚ್ಛತೆಗೆ ಶ್ರಮಿಸುತ್ತಿದೆ’ ಎಂದು ಯಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಪ್ರಧಾನಿಯವರ ಸ್ವಚ್ಛತಾ ಅಭಿಯಾನದಲ್ಲಿ ನಾವು ಪಾಲ್ಗೊಂಡ ಪರಿ ಇದಾಗಿದೆ’ ಎಂದು ಸೂಚ್ಯವಾಗಿ ತಿಳಿಸಿದರು.

‘ಬಹಿರಂಗ ಸ್ವಚ್ಛತೆಯಷ್ಟೇ ಅಂತರಂಗದ ಸ್ವಚ್ಛತೆಯೂ ಮುಖ್ಯ. ಮನಸ್ಸಿನ ಕೊಳೆಯನ್ನು ದೂರಮಾಡುವ ಶಕ್ತಿ ಸೌಂದರ್ಯ ಲಹರಿಗೆ ಇದೆ. ಮನಸ್ಸಿನ ಕೊಳೆ ದೂರವಾದರೆ ಮನುಷ್ಯ ದುಃಖದಿಂದ ವಿಮುಕ್ತನಾಗಿ ಆತನಿಗೆ ಸುಖ ಪ್ರಾಪ್ತಿ ಆಗುತ್ತದೆ’ ಎಂದು ವ್ಯಾಖ್ಯಾನಿಸಿದರು.

ADVERTISEMENT

‘ಮನುಷ್ಯ ದುಃಖದಿಂದ ಪಾರಾಗಲು ಇರುವ ದಾರಿಗಳ ಕುರಿತು ಉಪನಿಷತ್‌ಗಳಲ್ಲಿ ವಿಷದವಾಗಿ ವಿವರಿಸಲಾಗಿದೆ. ನಮ್ಮ ಎಲ್ಲ ಸ್ಥಿತಿಗಳಿಗೆ ಮನಸ್ಸೇ ಕಾರಣ. ಮನೋನಿಗ್ರಹ ಸಾಧಿಸಿದರೆ ಶಾಂತಿ, ಜ್ಞಾನ ಪ್ರಾಪ್ತಿಯಾಗುತ್ತದೆ. ಅದರಿಂದ ಆನಂದ ಉಂಟಾಗುತ್ತದೆ. ಸೌಂದರ್ಯಲಹರೀ ಪಾರಾಯಣದಿಂದ ಮನೋನಿಗ್ರಹ ಸಾಧಿಸಲು ಸಾಧ್ಯವಿದೆ. ಇದು ಶಂಕರರು ಮನುಕುಲಕ್ಕೆ ಕೊಟ್ಟ ಅನನ್ಯ ಕೊಡುಗೆ’ ಎಂದು ಅವರು ಹೇಳಿದರು.

’ಶಂಕರರು ಕೇವಲ ತಮ್ಮೊಬ್ಬರ ಮನಸಿನ ಕೊಳೆಯನ್ನು ಪರಿಹರಿಸುವಂತೆ ಕೇಳಿಕೊಂಡವರಲ್ಲ. ಸಮಾಜದ ಎಲ್ಲರ ಮನಸ್ಸನ್ನೂ ಪವಿತ್ರವಾಗಿಸು ಎಂದು ಪ್ರಾರ್ಥಿಸಿಕೊಂಡವರು ಅವರು’ ಎಂದು ಸ್ವಾಮೀಜಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.