ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆಯೊಂದು ಕೆರೆಯಲ್ಲಿ ಈಜಾಡುತ್ತಿದ್ದಾಗ ಹಠಾತ್ತನೆ ಮೃತ ಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಉದ್ಯಾನದ ಎಂಟು ವರ್ಷದ ಆನೆ ‘ಅಶ್ವತ್ಥಾಮ’ ಮಧ್ಯಾಹ್ನ ಉದ್ಯಾನದ ಸೀಗೆಕಟ್ಟೆ ಕೆರೆಯಲ್ಲಿ ಈಜಾಡುವಾಗ ದಿಢೀರನೆ ಮುಳುಗಿತು. ಆನೆಗಳನ್ನು ನೋಡಿಕೊಳ್ಳುತ್ತಿದ್ದ ಮಾವುತರು ಈ ಇದನ್ನು ಗಮನಿಸಿ ಕೂಡಲೇ ಆನೆಯನ್ನು ರಕ್ಷಿಸಲು ಮುಂದಾದರು.
ಆದರೆ ಆನೆಯು ಕೆರೆಯಲ್ಲಿ ಮೃತಪಟ್ಟಿತ್ತು. ಸಂಜೆಯ ವೇಳೆಗೆ ಆನೆ ನೀರಿನಿಂದ ಹೊರತೆಗೆಯಲಾಯಿತು. ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ಕುಮಾರ್ ಮಾತನಾಡಿ, ‘ಈ ಘಟನೆ ಆತಂಕ ತಂದಿದೆ. ಆರೋಗ್ಯವಾಗಿದ್ದ ಅಶ್ವತ್ಥಾಮ ನೀರಿನಲ್ಲಿ ಈಜಾಡುವಾಗ ಮೃತಪಟ್ಟಿದ್ದಾನೆ. ಹೃದಯಾಘಾತ ಅಥವಾ ಪಾರ್ಶ್ವವಾಯು ಆಗಿರುವ ಸಾಧ್ಯತೆಇದೆ. ಮರಣೋತ್ತರ ಪರೀಕ್ಷೆಯಲ್ಲಿ ನಿಖರ ಕಾರಣ ತಿಳಿಯ ಬೇಕಾಗಿದೆ’ ಎಂದರು.
ಕನಕಪುರ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಆನೆಗಳ ಗುಂಪಿನಿಂದ ಬೇರ್ಪಟ್ಟು ಒಂಟಿಯಾಗಿದ್ದ ಒಂದು ವರ್ಷದ ಮರಿಯನ್ನು ಸಂರಕ್ಷಿಸಿ ತರಲಾಗಿತ್ತು. ಈ ಆನೆಯೇ ಅಶ್ವತ್ಥಾಮ. ಆನೆಗೆ ಈ ಹಿಂದೆ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ‘ಅಶ್ವತ್ಥಾಮ’ ಎಂದು ನಾಮಕರಣ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.