ಬೆಂಗಳೂರು (ಪಿಟಿಐ): ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪದಚ್ಯುತಿಗೆ ಮುಂದಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪಕ್ಷದ ವಕ್ತಾರ ಸಿ.ಟಿ. ರವಿ ಮತ್ತು ಸಚಿವ ಸ್ಥಾನ ಕಳೆದುಕೊಂಡ ಅರವಿಂದ ಲಿಂಬಾವಳಿ ಅವರು ಗುರುವಾರ ಬೆಳಿಗ್ಗೆ ದೆಹಲಿಗೆ ತೆರಳಿದ್ದಾರೆ.
~ಪಕ್ಷದದಲ್ಲಿ ಕೆಲವು ಸಮಸ್ಯೆಗಳಿವೆ. ಕೆಲವು ಸಚಿವರು ಹಾಗೂ ಶಾಸಕರು ನನ್ನ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಪಕ್ಷದ ರಾಜ್ಯಧ್ಯಕ್ಷನಾಗಿ ಅತೃಪ್ತ ಶಾಸಕರ ಭಾವನೆಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುವುದು ನನ್ನ ಕರ್ತವ್ಯ~ ಎಂದು ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ. ಅವರು ಗುರುವಾರ ಬೆಳಿಗ್ಗೆ ದೆಹಲಿಗೆ ತೆರಳುವ ಮೊದಲು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು ~ಪಕ್ಷ ಮುಖ್ಯ, ನಂತರ ವ್ಯಕ್ತಿ. ಪ್ರಸ್ತುತ ಕೆಲವು ಶಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ~ ಎಂದು ತಿಳಿಸಿದರು.
ಈಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮತ್ತೆ ಭ್ರಷ್ಟಾಚಾರದ ಹೊಸ ಆರೋಪಗಳು ಕೇಳಿಬಂದಾಗ, ತಾವು ಭಿನ್ನಮತೀಯರೆಂದು ಗುರುತಿಸಿಕೊಂಡ ಪಕ್ಷದ ಕೆಲವು ಅತೃಪ್ತ ಶಾಸಕರು, ಸಚಿವರು ~ಯಡಿಯೂರಪ್ಪ ಕಳಿಸಿ, ಬಿಜೆಪಿ ಉಳಿಸಿ~ ಚಳವಳಿ~ ಹುಟ್ಟುಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.