ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗೂ, ‘ತಾಳಿಭಾಗ್ಯ’ಕ್ಕೂ ಅನೇಕ ದಶಕಗಳ ನಂಟಿದೆ. ಹಣ ಕೊಟ್ಟು ನೌಕರಿ ಗಿಟ್ಟಿಸಲು ಸಾಧ್ಯವಾಗದೇ ಇದ್ದರೆ ಕೆಪಿಎಸ್ಸಿ ಅಧ್ಯಕ್ಷರ, ಸದಸ್ಯರ, ಏಜೆಂಟರ ಮಗಳಂದಿರನ್ನು ಮದುವೆ-ಯಾಗಿ ತಮ್ಮ ಆಸೆ ಈಡೇರಿಸಿಕೊಂಡ ಉದಾಹರಣೆ ಇದೆ.
2011ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಇಂತಹ ‘ತಾಳಿಭಾಗ್ಯ’ ಅನುಷ್ಠಾನಗೊಂಡಿದೆ. ತಾಳಿಭಾಗ್ಯ ಕೊಡುಗೆ ಬಗ್ಗೆ ಅನೇಕ ಅಭ್ಯರ್ಥಿಗಳು ಸಿಐಡಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಐಡಿಗೆ ಕೆಲವು ಮಾಹಿತಿ ಲಭ್ಯವಾಗಿದೆ. ನಿಶ್ಚಿತಾರ್ಥ ನಡೆದಿರುವ ಸ್ಥಳ, ದಿನಾಂಕ ಮತ್ತು ವ್ಯಕ್ತಿಗಳ ಹೆಸರನ್ನು ಅದು ವರದಿಯಲ್ಲಿ ದಾಖಲಿಸಿದೆ.
‘ಗೋನಾಳ ಭೀಮಪ್ಪ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ಏಜೆಂಟ್ ಒಬ್ಬರ ಪುತ್ರಿಯ ನಿಶ್ಚಿತಾರ್ಥ ಆಗ ಸಂದರ್ಶನಕ್ಕೆ ಹಾಜರಾಗಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬರ ಜೊತೆ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್ನಲ್ಲಿ ನಡೆದಿತ್ತು’ ಎಂದು ಸಿಐಡಿ ಉಲ್ಲೇಖಿಸಿದೆ. ತಾಳಿಭಾಗ್ಯ ಫಲಾನುಭವಿಗಳ ಬಗ್ಗೆ ನೇರ ದಾಖಲೆಗಳು ಸಿಗಲಿಲ್ಲವಾದರೂ ಈ ದಿಸೆಯಲ್ಲಿ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ನಿತಿನ್ ಚಕ್ಕಿ ಎಂಬ ಅಭ್ಯರ್ಥಿ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ತನಿಖೆ ನಡೆಸಿದ್ದಾರೆ. ನಿತಿನ್ ಬಳಸುತ್ತಿದ್ದ ದೂರವಾಣಿ ಅವರ ತಂದೆಯ ಹೆಸರಿನಲ್ಲಿದೆ. ಇದರ ಮೂಲಕ ಅವರು ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಸಿಬ್ಬಂದಿಯನ್ನು ಸಂಪರ್ಕಿಸಿದ್ದರು ಎನ್ನುವುದು ಪತ್ತೆಯಾಗಿದೆ.
ನಿತಿನ್ಗೆ ಮುಖ್ಯ ಪರೀಕ್ಷೆಯಲ್ಲಿ 1067 ಅಂಕ ಬಂದಿದೆ. ಸಂದರ್ಶನದಲ್ಲಿ 150 ಅಂಕ ಬಂದಿದೆ. ಅವರು ಕೆಪಿಎಸ್ಸಿಯ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಸಹಾಯಕ ಅನಿಲ್ ಅವರಿಗೆ 20 ಬಾರಿ ದೂರವಾಣಿ ಕರೆ ಮಾಡಿದ್ದರು. ಸದಸ್ಯ ದಯಾಶಂಕರ್ ಅವರ ಆಪ್ತಸಹಾಯಕ ರಘುನಾಥ್ಗೆ 4 ಬಾರಿ ಕರೆ ಮಾಡಿದ್ದರು. ಸದಸ್ಯ ಎಚ್.ಡಿ.ಪಾಟೀಲರಿಗೆ 3 ಬಾರಿ ಹಾಗೂ ಗೋನಾಳ ಭೀಮಪ್ಪ ಅವರ ಆಪ್ತ ಸಹಾಯಕ ಗೋಪಿಕೃಷ್ಣ ಅವರಿಗೆ ಒಂದು ಬಾರಿ ಕರೆ ಮಾಡಿದ್ದರು.
ನಿತಿನ್ ಚಕ್ಕಿ ಅವರ ತಂದೆ ತಾಯಿ ಇಬ್ಬರೂ ನಿವೃತ್ತ ವೈದ್ಯರಾಗಿದ್ದರೂ ಕೆಪಿಎಸ್ಸಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಕುಟುಂಬದ ವಾರ್ಷಿಕ ಆದಾಯ ₨ 1.20 ಲಕ್ಷ ಎಂದು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ತನಿಖೆ ಅಗತ್ಯವಿದೆ ಎಂದು ಸಿಐಡಿ ಮಧ್ಯಂತರ ವರದಿ ಹೇಳಿದೆ.
ಆರೋಪ ಸುಳ್ಳು: ವಂದನಾ ಭಟ್, ಭಾವನಾ ಭಟ್, ಎ.ಆರ್.ಸೂರಜ್, ಎ.ಆರ್.ಸುಮೀತ್ ಎಂಬ ಒಂದೇ ಕುಟುಂಬದ ನಾಲ್ಕೂ ಮಂದಿ ಒಂದೇ ಕೊಠಡಿಯಲ್ಲಿ ಕುಳಿತು ಮುಖ್ಯ ಪರೀಕ್ಷೆ ಬರೆದಿದ್ದರು. ಅಲ್ಲದೆ ಈ ನಾಲ್ಕೂ ಮಂದಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪವಿತ್ತು.
ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು, ‘ಈ ನಾಲ್ವರೂ ಒಂದೇ ಕೋಣೆಯಲ್ಲಿ ಕುಳಿತು ಮುಖ್ಯ ಪರೀಕ್ಷೆ ಬರೆದಿದ್ದರು ಎನ್ನುವುದು ಸುಳ್ಳು’ ಎಂದು ಪತ್ತೆ ಮಾಡಿದೆ. ಎಲ್ಲರೂ ಬೇರೆ ಬೇರೆ ಕೋಣೆಯಲ್ಲಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಈ ಅಭ್ಯರ್ಥಿಗಳು ಹಿಂದೆಯೂ ಅನೇಕ ಸಲ ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದರು. ಭಾವನಾ ಭಟ್ ಅವರು 2009ರಲ್ಲಿ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಮುಖ್ಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
2010ರ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದರೂ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಿರಲಿಲ್ಲ. 2006ರಲ್ಲಿಯೇ ಅವರು ಕೆಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ ಪೂರ್ವಭಾವಿ ಪರೀಕ್ಷೆ ಪಾಸಾಗಿರಲಿಲ್ಲ. 2008ರಲ್ಲಿ ಮತ್ತೆ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾದರು. ಪೂರ್ವಭಾವಿ ಪರೀಕ್ಷೆಯಲ್ಲಿಯೂ ಪಾಸಾದರು. ಆದರೆ ಮುಂದೆ ಸಾಗಲಿಲ್ಲ.
2010ರಲ್ಲಿ ಪೂರ್ವಭಾವಿ, ಮುಖ್ಯ ಪರೀಕ್ಷೆ, ಸಂದರ್ಶನ ಎಲ್ಲದರಲ್ಲಿಯೂ ಪಾಸಾಗಿ ಗ್ರೂಪ್ ಬಿ ಹುದ್ದೆ ಪಡೆದರು. 2011ರಲ್ಲಿ ಎಲ್ಲ ಪರೀಕ್ಷೆ ಪಾಸಾಗಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಂದನಾ ಭಟ್ ಕೂಡ 2010ರಲ್ಲಿ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡರು. ಆದರೆ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. 2011ರಲ್ಲಿ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಪಾಸು ಮಾಡಿದರು.
ಮುಖ್ಯ ಪರೀಕ್ಷೆಯಲ್ಲಿ ವಿಫಲರಾದರು. 2008ರಲ್ಲಿ ಕೆಪಿಎಸ್ಸಿಯ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. 2010ರಲ್ಲಿ ಕೆಎಎಸ್ ಪರೀಕ್ಷೆ ಪಾಸು ಮಾಡಿ ವಾಣಿಜ್ಯ ತೆರಿಗೆ ಅಧಿಕಾರಿ ಆದರು. 2011ರಲ್ಲಿಯೂ ಕೆಎಎಸ್ ಪರೀಕ್ಷೆ ಪಾಸಾಗಿ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎ.ಆರ್.ಸೂರಜ್ ಅವರು 2006ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಫಲರಾದರು.
2008ರಲ್ಲಿ ಯುಪಿಎಸ್ಸಿ ಪೂರ್ವಭಾವಿ, ಮುಖ್ಯ ಪರೀಕ್ಷೆಯಲ್ಲಿ ಪಾಸಾದರು. ಆದರೆ ನೇಮಕಾತಿ ಆಗಲಿಲ್ಲ. 2010ರಲ್ಲಿ ಯುಪಿಎಸ್ಸಿಗೆ ಪ್ರಯತ್ನಿಸಿ ವಿಫಲರಾದರು. 2006ರಲ್ಲಿ ಕೆಪಿಎಸ್ಸಿ ಪೂರ್ವಭಾವಿ, ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ನೇಮಕಾತಿ ಸಿಗಲಿಲ್ಲ. 2010ರಲ್ಲಿಯೂ ಹೀಗೆಯೇ ಆಯಿತು. ಆದರೆ 2011ರಲ್ಲಿ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಎ.ಆರ್.ಸುಮೀತ್ ಅವರು 2011ರಲ್ಲಿ ಯುಪಿಎಸ್ಸಿ ಮತ್ತು 2010ರ ಕೆಪಿಎಸ್ಸಿ ಪರೀಕ್ಷೆಯಲ್ಲಿ ಸಫಲರಾಗಲಿಲ್ಲ. ಆದರೆ 2011ರ ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಲ್ಲ ಹಂತಗಳನ್ನೂ ದಾಟಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಮೀತ್ ಹಾಗೂ ಸೂರಜ್ ಅವರು ಕೆಪಿಎಸ್ಸಿ ಸದಸ್ಯೆ ಡಾ.ಮಂಗಳಾ ಶ್ರೀಧರ್ ಅವರ ಆಪ್ತಸಹಾಯಕ ಅಶೋಕ್ಕುಮಾರ್ ಜೊತೆ ಸಂಪರ್ಕದಲ್ಲಿದ್ದರು. ಸುಮೀತ್ ಅವರು ನೇಮಕಾತಿಗೆ ಸಂಬಂಧಿಸಿದಂತೆ 133 ಕರೆ ಮಾಡಿದ್ದಾರೆ.
ಗೋನಾಳ ಭೀಮಪ್ಪ ಅವರ ಏಜೆಂಟ್ ಎನ್ನಲಾಗುವ ಅಮರನಾಥ್ ಅವರಿಗೆ 27 ಬಾರಿ ಕರೆ ಮಾಡಿದ್ದಾರೆ. ಸೂರಜ್ ಅವರು ಮಂಗಳಾ ಶ್ರೀಧರ್ ಅವರ ಆಪ್ತ ಸಹಾಯಕ ಅಶೋಕ್ಕುಮಾರ್ ಅವರನ್ನು 4 ಬಾರಿ ಸಂಪರ್ಕಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಸಿಐಡಿ ಹೇಳಿದೆ.
(ಮೌಲ್ಯಮಾಪನದ ಇನ್ನಷ್ಟು ಎಡವಟ್ಟುಗಳು: ನಾಳಿನ ಸಂಚಿಕೆಯಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.