ಬೆಂಗಳೂರು: ಬಡ್ತಿ ಕಡತ ವಿಲೇವಾರಿಗೆ ತನ್ನ ಕಚೇರಿಯ ನೌಕರನಿಂದಲೇ ₨10 ಸಾವಿರ ಲಂಚ ಪಡೆದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ವಿ.ವೆಂಕಟರಾಮು ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಬಸವರಾಜ್ ಕುರುವತ್ತಿ ಅವರಿಗೆ ಬಡ್ತಿ ನೀಡಬೇಕಿತ್ತು.
ಈ ಪ್ರಕ್ರಿಯೆಗೆ ಸಂಬಂಧಿಸಿದ ಕಡತ ವಿಲೇವಾರಿ ಮಾಡುವಂತೆ ಅವರು, ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದರು. ಕಡತ ವಿಲೇವಾರಿಗೆ ₨ 50 ಸಾವಿರ ನೀಡುವಂತೆ ಒತ್ತಾಯಿಸಿದ್ದರು. ಮತ್ತೆ ಇಬ್ಬರ ನಡುವೆ ಮಾತುಕತೆ ನಡೆದಿತ್ತು. ಸೋಮವಾರ ₨ 10 ಸಾವಿರ ಮುಂಗಡ ನೀಡುವಂತೆ ಮತ್ತೆ ಒತ್ತಾಯಿಸಿದ್ದರು.
ಈ ಕುರಿತು ಬಸವರಾಜ್ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮೊದಲೇ ನಡೆದ ಮಾತು-ಕತೆಯಂತೆ ಸೋಮವಾರ ಕಚೇರಿಗೆ ತೆರಳಿದ ಬಸವರಾಜ್ ₨ 10 ಸಾವಿರ ಲಂಚವನ್ನು ವೆಂಕಟರಾಮು ಅವರಿಗೆ ನೀಡಿದರು. ತಕ್ಷಣವೇ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು.
ಆರೋಪಿಯ ಗಿರಿನಗರದ ಮನೆಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್ಪಿಗಳಾದ ವಿ.ಪಿ.ಎಂ.ಸ್ವಾಮಿ, ಡಿ.ಫಾಲಾಕ್ಷಯ್ಯ, ಇನ್ಸ್ಪೆಕ್ಟರ್ಗಳಾದ ಎನ್.ಜಿ.ಶಿವಶಂಕರ್ ಮತ್ತು ಅನಿಲ್ ಗ್ರಾಮಪುರೋಹಿತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.