
ಉಡುಪಿ: `ನಮಗೆ ದೊಡ್ಡ ಸಚಿವರ, ನಾಯಕರ ಪ್ರಚಾರ ಬೇಕಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆ ಪ್ರಚಾರ ನಿಮಿತ್ತ ಉಡುಪಿಗೆ ಆಗಮಿಸಿದ ಅವರು ಪಕ್ಷದ ಕಚೇರಿ ಬಳಿ ಗುರುವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
`ಈಗ ಪ್ರಚಾರಕ್ಕೆ ಬಂದಿರುವವರು, ಉಡುಪಿ-ಚಿಕ್ಕಮಗಳೂರು ಸರಿಯಾಗಿ ಗೊತ್ತಿರುವ ಕಾರ್ಯಕರ್ತರೇ ಚುನಾವಣೆ ಗೆಲ್ಲಿಸಿಕೊಡಲು ಸಾಕು~ ಎಂದು ಯಡಿಯೂರಪ್ಪ ಬಾರದೇ ಇರುವ ಬಗ್ಗೆ ಪ್ರತಿಕ್ರಿಯಿಸಿದರು.
`ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕೇಂದ್ರ ಸಚಿವರು, ಕಾಂಗ್ರೆಸ್ಸಿಗರು ಬಂದಿದ್ದಾರೆ ನಿಜ. ಆದರೆ ಚಿಕ್ಕಮಗಳೂರು-ಉಡುಪಿ ಅಂದರೆ ಏನೆಂದೇ ಗೊತ್ತಿಲ್ಲದವರು ಬಂದು ಮಾಡುವುದಾದರೂ ಏನು? ನಮ್ಮ ಕಾರ್ಯಕರ್ತರಿಗೆ ಈ ಕ್ಷೇತ್ರದ ಎಲ್ಲ ವಿಚಾರ ಗೊತ್ತಿದೆ~ ಎಂದು ಕಾಂಗ್ರೆಸ್ ಪ್ರಚಾರ ವೈಖರಿಗೆ ತಿರುಗೇಟು ನೀಡಿದರು.
`ಯಡಿಯೂರಪ್ಪ ಅವರು ಈವರೆಗೂ ಪ್ರಚಾರಕ್ಕೆ ಬಂದಿಲ್ಲ. ಚುನಾವಣೆ ಮೇಲೆ ಏನಾದರೂ ಪರಿಣಾಮವಾಗುವುದೇ?~ ಎಂಬ ಪ್ರಶ್ನೆಗೆ, `ಇನ್ನೂ ಎರಡು ದಿನ ಸಮಯವಿದೆ. ಕಾದು ನೋಡಿ~ ಎಂದು ಚುಟುಕಾಗಿ ಅವರು ಪ್ರತಿಕ್ರಿಯಿಸಿದರು.
`ಕಳೆದ ಚುನಾವಣೆಯಲ್ಲಿ ನಾನು 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿಯ ಸುನೀಲ್ ಕುಮಾರ್ ಅದಕ್ಕಿಂತ 4 ಪಟ್ಟು ಹೆಚ್ಚು ಅಂತರದಿಂದ ಗೆಲ್ಲುತ್ತಾರೆ~ ಎಂದು ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೊಂದೆಡೆ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು, `ಯಡಿಯೂರಪ್ಪ ಬಾರದೇ ಇದ್ದರೂ ನಾವು ಅಪೇಕ್ಷೆಪಟ್ಟ ಸಚಿವರು, ಶಾಸಕರು ಪ್ರಚಾರ ನಡೆಸಿದ್ದಾರೆ. ಪ್ರಚಾರಕ್ಕೆ ಬರಲು ಆಗುವುದಿಲ್ಲವೆಂದು ಮೊದಲೇ ಯಡಿಯೂರಪ್ಪ ತಿಳಿಸಿದ್ದರು~ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.