ADVERTISEMENT

ಎರಡು ತಿಂಗಳಲ್ಲಿ ಆರು ಮಂದಿ ಸಾವು: ಜ್ವರಕ್ಕೆ ತತ್ತರಿಸಿ ಊರು ತೊರೆಯುತ್ತಿರುವ ಜನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ಎರಡು ತಿಂಗಳಲ್ಲಿ ಆರು ಮಂದಿ ಸಾವು: ಜ್ವರಕ್ಕೆ ತತ್ತರಿಸಿ ಊರು ತೊರೆಯುತ್ತಿರುವ ಜನ
ಎರಡು ತಿಂಗಳಲ್ಲಿ ಆರು ಮಂದಿ ಸಾವು: ಜ್ವರಕ್ಕೆ ತತ್ತರಿಸಿ ಊರು ತೊರೆಯುತ್ತಿರುವ ಜನ   

ಹೊಸಪೇಟೆ: ತಾಲ್ಲೂಕಿನ ಜಿ. ನಾಗಾಲಾಪುರ ತಾಂಡಾದಲ್ಲಿ ಎರಡು ತಿಂಗಳಲ್ಲಿ ಆರು ಮಂದಿ ಜ್ವರದಿಂದ ಸಾವಿಗೀಡಾಗಿದ್ದಾರೆ. ಪ್ರತಿ ಮನೆಯಲ್ಲೂ ಕನಿಷ್ಠ ಒಬ್ಬರು ಜ್ವರಪೀಡಿತರಾಗಿದ್ದಾರೆ. ಮಹಿಳೆಯೊಬ್ಬರು ಸೋಮವಾರ ಸಂಜೆ ಮೃತಪಟ್ಟಿದ್ದು, ಆತಂಕಗೊಂಡ ಗ್ರಾಮಸ್ಥರು ಊರು ತೊರೆಯುತ್ತಿದ್ದಾರೆ.

ಕಳೆದ ಏಪ್ರಿಲ್‌ 15ರಂದು ಗ್ರಾಮದ ರಾಮ ನಾಯ್ಕ (40) ಎಂಬುವರು ಜ್ವರದಿಂದ ಮೃತಪಟ್ಟಿದ್ದರು. ಅದಾದ ಬಳಿಕ ಮೇ 8ರಂದು ಯಮುನವ್ವ (70), 17ರಂದು ಶಂಕರವ್ವ (60), 24ರಂದು  ತೊತ್ಯಾ ನಾಯ್ಕ (60), ಜೂನ್‌ 1ರಂದು ಗೋವಿಂದ ನಾಯ್ಕ (40) ಹಾಗೂ ಸೋಮವಾರ ಸಂಜೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದುರ್ಗಿಬಾಯಿ (35) ಮೃತಪಟ್ಟರು. ಒಂದೂವರೆ ತಿಂಗಳ ಅವಧಿಯಲ್ಲಿ ಗ್ರಾಮದಲ್ಲಿ ಆರು ಮಂದಿ ಮೃತಪಟ್ಟಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

‘ಜ್ವರದಿಂದ ಸಾಯುತ್ತಿದ್ದಾರೆ’ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ನಿಖರವಾಗಿ ಡೆಂಗಿ ಜ್ವರದಿಂದ ಎನ್ನುತ್ತಾರೆ.  ವೈದ್ಯರು ಇದನ್ನು ದೃಢಪಡಿಸಿದ್ದಾಗಿಯೂ ತಿಳಿಸಿದರು.

ADVERTISEMENT

ಜ್ವರದಿಂದ ಬಳಲುತ್ತಿರುವವರು ಉತ್ತಮ ಚಿಕಿತ್ಸೆಗಾಗಿ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಉಡುಪಿಗೂ ತೆರಳಿದ್ದಾರೆ.  ಈ ಕುರಿತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ನಾಗೇಂದ್ರ ಕುಮಾರ್‌ ಅವರನ್ನು ಪ್ರಶ್ನಿಸಿದರೆ, ‘ಎರಡು ವಾರಗಳ ಹಿಂದೆ ಗ್ರಾಮದಲ್ಲಿ ವೈರಾಣು ಜ್ವರ ಕಾಣಿಸಿಕೊಂಡಿತ್ತು. ನಮ್ಮ ಸಿಬ್ಬಂದಿ  ಪ್ರತಿಯೊಬ್ಬರ ರಕ್ತದ ಪರೀಕ್ಷೆ ಮಾಡಿದ್ದರು. ಯಾರಲ್ಲೂ ಡೆಂಗಿ ಪಾಸಿಟಿವ್‌ ಬಂದಿರಲಿಲ್ಲ’ ಎಂದರು.

* ಆರು ಜನ ಸಾವಿಗೀಡಾಗಿರುವ ವಿಷಯ ಗೊತ್ತಿಲ್ಲ. ಗ್ರಾಮದ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

–ಡಾ. ನಾಗೇಂದ್ರ ಕುಮಾರ್‌, ತಾಲ್ಲೂಕು ಆರೋಗ್ಯಾಧಿಕಾರಿ

ಮುಖ್ಯಾಂಶಗಳು
*
 ಒಂದೂವರೆ ತಿಂಗಳ ಅವಧಿಯಲ್ಲಿ ಗ್ರಾಮದಲ್ಲಿ ಆರು ಮಂದಿ ಸಾವು

* 2ವಾರಗಳ ಹಿಂದೆ  ವೈರಾಣು ಜ್ವರ ಕಾಣಿಸಿಕೊಂಡಿತ್ತು.
* ಪ್ರತಿ ಮನೆಯಲ್ಲೂ ಕನಿಷ್ಠ ಒಬ್ಬ  ಜ್ವರಪೀಡಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.