ADVERTISEMENT

ಎರಡು ಲಕ್ಷ ಮಂದಿಗಿಲ್ಲ ಬಾಂಡ್ ಭಾಗ್ಯ

ಎ.ಎಂ.ಸುರೇಶ
Published 19 ಏಪ್ರಿಲ್ 2011, 19:00 IST
Last Updated 19 ಏಪ್ರಿಲ್ 2011, 19:00 IST

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಜನಪ್ರಿಯವಾಗಿರುವ ಭಾಗ್ಯಲಕ್ಷ್ಮಿ ಯೋಜನೆಯ ನಿಯಮಗಳನ್ನು ಸರ್ಕಾರ ಏಕಾಏಕಿ ಬದಲಾಯಿಸಿರುವುದರಿಂದ ಸುಮಾರು ಎರಡು ಲಕ್ಷ ಫಲಾನುಭವಿಗಳು ಬಾಂಡ್‌ನಿಂದ ವಂಚಿತರಾಗಿದ್ದಾರೆ. ಎರಡು ವರ್ಷಗಳಿಂದ ಈಚೆಗೆ ಸುಮಾರು ನಾಲ್ಕು ಲಕ್ಷ ಮಂದಿ ಹೆಸರು ನೋಂದಾಯಿಸಿದ್ದು, ಈ ಪೈಕಿ ಬಿಪಿಎಲ್ ಕಾರ್ಡ್ ಇಲ್ಲದ ಫಲಾನುಭವಿಗಳು ಎರಡು ಲಕ್ಷ ಇದ್ದಾರೆ ಎಂದು ಅಂದಾಜಿಸಲಾಗಿದೆ.

ಇದುವರೆಗೆ ಆದಾಯ ಪ್ರಮಾಣ ಪತ್ರ ನೀಡಿದರೂ ಭಾಗ್ಯಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡು ಬಾಂಡ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈಗ ಆದಾಯ ಪ್ರಮಾಣ ಪತ್ರದ ಜೊತೆಗೆ ಕಾಯಂ ಬಿಪಿಎಲ್ ಕಾರ್ಡ್ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ 2009-10 ಮತ್ತು 2010-11ನೇ ಸಾಲಿನಲ್ಲಿ ಕೇವಲ ಆದಾಯ ಪ್ರಮಾಣ ಪತ್ರ ನೀಡಿ ಹೆಸರು ನೋಂದಾಯಿಸಿರುವ ಫಲಾನುಭವಿಗಳಿಗೆ ಈಗ ಬಾಂಡ್‌ಗಳನ್ನು ವಿತರಿಸುತ್ತಿಲ್ಲ.

ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು ಕಳೆದ ತಿಂಗಳ 23ರಂದು ಪರಿಷ್ಕೃತ ನಿಯಮಗಳ ಜಾರಿ ಸಂಬಂಧ ಆದೇಶ ಹೊರಡಿಸಿದ್ದು, ಅದರ ಪ್ರಕಾರವೇ ಇನ್ನು ಮುಂದೆ ಫಲಾನುಭವಿಗಳ ಪಟ್ಟಿಯನ್ನು ಪುನರ್‌ಪರಿಶೀಲಿಸಿ ಬಾಂಡ್‌ಗಳನ್ನು ವಿತರಿಸಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈಗಾಗಲೇ ಬಾಂಡ್ ಪಡೆದುಕೊಂಡಿದ್ದರೆ ಅಂತಹವರಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಎರಡು ವರ್ಷಗಳಿಂದ ಸುಮಾರು ನಾಲ್ಕು ಲಕ್ಷ ಮಂದಿ ಫಲಾನುಭವಿಗಳು ಚಾತಕ ಪಕ್ಷಿಗಳಂತೆ ಬಾಂಡ್‌ಗಾಗಿ ಕಾಯುತ್ತಿದ್ದು, ಅವರೆಲ್ಲ ಸರ್ಕಾರದ ಈ ಆದೇಶದಿಂದಾಗಿ ಹತಾಶರಾಗಿದ್ದಾರೆ.

‘ಹೆಸರು ನೋಂದಾಯಿಸುವಾಗ ಬಿಪಿಎಲ್ ಕಾರ್ಡ್ ಕೇಳಲಿಲ್ಲ, ಆದಾಯ ಪ್ರಮಾಣ ಪತ್ರ ಇದ್ದರೂ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿತ್ತು. ಹೀಗಾಗಿ ನಾವು ಆದಾಯ ಪ್ರಮಾಣ ಪತ್ರ ಮಾತ್ರ ನೀಡಿದ್ದೇವೆ. ಆದರೆ ಈಗ ದಿಢೀರನೇ ನಿಯಮ ಬದಲಾಯಿಸಿ ಬಿಪಿಎಲ್ ಕಾರ್ಡ್ ನೀಡಿ ಎಂದು ಕೇಳುತ್ತಿದ್ದಾರೆ. ಪ್ರಭಾವಿಗಳ ಕೈವಾಡದಿಂದಾಗಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ಈಗ ನಾವು ಏನು ಮಾಡಬೇಕು’ ಎಂದು ವಸಂತನಗರದ ಫಲಾನುಭವಿಯ ಮಗುವಿನ ತಾಯಿ ಎಸ್.ಜಯಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಹೆಸರು ನೋಂದಾಯಿಸುವ ಮೊದಲೇ ಬಿಪಿಎಲ್ ಕಾರ್ಡ್ ನೀಡುವುದು ಕಡ್ಡಾಯ ಎಂದು ಹೇಳಿದ್ದರೆ, ನಾವು ಈ ಯೋಜನೆಯ ತಂಟೆಗೆ ಬರುತ್ತಿರಲಿಲ್ಲ. ಆದಾಯ ಪ್ರಮಾಣ ಪತ್ರ ಮಾಡಿಸಲು 3-4 ಬಾರಿ ತಾಲ್ಲೂಕು ಕಚೇರಿಗೆ ಅಲೆದಾಡಿದ್ದು ಅಲ್ಲದೆ ಮಧ್ಯವರ್ತಿಗೆ ಹಣ ನೀಡಿದ್ದೇವೆ. ಒಂದು ವಾರ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಅಂಗನವಾಡಿ, ತಾಲ್ಲೂಕು ಕಚೇರಿ, ನೆಮ್ಮದಿ ಕೇಂದ್ರಕ್ಕೆ ಅಲೆದಾಡಿದ್ದೇವೆ. ಈಗ ಕಾರ್ಡ್ ಇಲ್ಲದಿದ್ದರೆ ಬಾಂಡ್ ನೀಡುವುದಿಲ್ಲ ಎನ್ನುವುದು ಸರಿಯಲ್ಲ’ ಎಂದು ಮತ್ತೊಬ್ಬ ಫಲಾನುಭವಿ ನಾಗರತ್ನ ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಹಲವರು ತಮ್ಮ ಅಸಮಾಧಾನ ತೋಡಿಕೊಂಡರು.

ಹೆಣ್ಣು ಭ್ರೂಣಹತ್ಯೆಯನ್ನು ತಡೆಯುವ ದೃಷ್ಟಿಯಿಂದ 2006ರಲ್ಲಿ ಜಾರಿಗೊಳಿಸಿದ ಭಾಗ್ಯಲಕ್ಷ್ಮಿ ಯೋಜನೆಯಡಿ ಸುಮಾರು 12 ಲಕ್ಷ ಫಲಾನುಭವಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದು, ಎಂಟು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ. ಇನ್ನೂ ನಾಲ್ಕು ಲಕ್ಷ ಮಂದಿಗೆ ಬಾಂಡ್‌ಗಳ ವಿತರಣೆಯಾಗಿಲ್ಲ.

2009-10ನೇ ಸಾಲಿನಲ್ಲಿ ಮಂಜೂರಾತಿ ನೀಡಿ ಬಾಂಡ್ ವಿತರಣೆಗೆ ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ಇದೇ 30ರ ಒಳಗೆ ಮತ್ತೊಮ್ಮೆ ಪರಿಶೀಲಿಸಿ, ಕುಟುಂಬದ ಮುಖ್ಯಸ್ಥರ ಭಾವಚಿತ್ರ ಇರುವ ಕಾಯಂ ಬಿಪಿಎಲ್ ಕಾರ್ಡ್, ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ನೀಡಿದ್ದಲ್ಲಿ ಮಾತ್ರ ಬಾಂಡ್ ನೀಡತಕ್ಕದ್ದು ಎಂದು ಸೂಚಿಸಲಾಗಿದೆ. ಅದೇ ರೀತಿ 2010-11ನೇ ಸಾಲಿನ ಫಲಾನುಭವಿಗಳ ಪಟ್ಟಿಯನ್ನು ಸಹ ಮೇ 31ರ ಒಳಗೆ ಪುನರ್ ಪರಿಶೀಲಿಸಿ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ಬಾಂಡ್ ನೀಡಲಾಗುತ್ತದೆ.
 
ಅರ್ಹರಲ್ಲದವರೂ ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಇದರಿಂದಾಗಿಯೇ ಬಾಂಡ್‌ಗಳನ್ನು ನೀಡುವುದು ವಿಳಂಬವಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ ಎಂಬುದರಲ್ಲಿ ಸತ್ಯಾಂಶ ಇರಬಹುದು. ಸರಿಪಡಿಸುವ ಕಾರ್ಯ ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.