ಚಿತ್ರದುರ್ಗ: ಜಿಲ್ಲೆಯಲ್ಲಿ ಭಯಭೀತಿ ಮೂಡಿಸಿರುವ ಸೈಕೋ ಕಿಲ್ಲರ್ ಇನ್ನೂ ಪತ್ತೆಯಾಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದಾನೆ.
ತಮಿಳುನಾಡು ಪೊಲೀಸರ ನೆರವು ಪಡೆದಿರುವ ಜಿಲ್ಲೆಯ ಪೊಲೀಸರು ಇದೀಗ ಹೊಸಪೇಟೆ ಮತ್ತಿತರ ಸ್ಥಳಗಳಿಗೆ ತೆರಳಿ ಆತನ ಶೋಧ ಕಾರ್ಯ ನಡೆಸುತ್ತಿದ್ದಾರೆ.
ತಮಿಳುನಾಡಿನ ಸೇಲಂ ಹಾಗೂ ಇತರ ಜಿಲ್ಲೆಗಳಲ್ಲಿ 19 ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ನಾಪತ್ತೆಯಾಗಿರುವ ಸೇಲಂ ಜಿಲ್ಲೆಯ ಈಡಪ್ಪಾಡಿ ತಾಲ್ಲೂಕಿನ ಕಟ್ಟುವಾಳ್ ಕನ್ನಿಯಾಪಟ್ಟಿಯ ಕೋನಸಮುದ್ರಂನ ಆರೋಪಿ ಎಂ. ಶಂಕರ್ ಅಲಿಯಾಸ್ ಜೈಶಂಕರ್ (33), ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲೂ ಕೊಲೆ, ಅತ್ಯಾಚಾರಗೈದು ನಾಗರಿಕರಲ್ಲಿ ಭೀತಿ ಮೂಡಿಸಿದ್ದಾನೆ. ಕಳೆದ ಒಂದು ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ಕೊಲೆ, ಅತ್ಯಾಚಾರಗೈದಿದ್ದಾನೆ.
ಜೈಶಂಕರ್ ಹೊಸಪೇಟೆಯಲ್ಲಿ ಲಾರಿ ಚಾಲಕನಾಗಿ ಹಲವು ದಿನಗಳ ಕಾಲ ಕೆಲಸ ಮಾಡಿದ್ದ ಎನ್ನುವ ಸುಳಿವು ದೊರೆತ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಜಿಲ್ಲೆಯ ಪೊಲೀಸರ ತಂಡ ಅಲ್ಲಿಗೆ ಧಾವಿಸಿ ಮಾಹಿತಿ ಕಲೆ ಹಾಕುತ್ತಿದೆ.
ತಮಿಳುನಾಡಿನಿಂದ 15 ಪೊಲೀಸರ ತಂಡ ಆಗಮಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಸ್ತುವಾರಿಯಲ್ಲಿ ರಚಿಸಲಾಗಿರುವ ತಂಡಗಳಿಗೆ ನೆರವು ನೀಡುತ್ತಿದ್ದಾರೆ.
ತಮಿಳು, ಕನ್ನಡ, ಮಲಯಾಳಂ ಹಾಗೂ ಅಲ್ಪಸ್ವಲ್ಪ ಹಿಂದಿ ಮಾತನಾಡುವ ಜೈಶಂಕರ್, ಸತತ ಪ್ರಯಾಣ ಮಾಡುತ್ತಿದ್ದಾನೆ. ನಗರ, ಪಟ್ಟಣಗಳಿಂದ ದೂರವಿರುವ ಈತ ಹೆದ್ದಾರಿ ಪಕ್ಕದ ಒಂಟಿ ಮನೆಗಳು, ತೋಟದ ಮನೆಗಳ ಮೇಲೆ ದಾಳಿ ಮಾಡಿ ಕೊಲೆ, ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಮೇಶ್ರೆಡ್ಡಿ ಪ್ರಕರಣದ ನಂತರ ಬೆಚ್ಚಿಬೀಳಿಸಿರುವ ಪ್ರಕರಣ ಇದಾಗಿದ್ದು, ಜಿಲ್ಲೆಯಲ್ಲಿ ಜನರ ನಿದ್ದೆ, ನೆಮ್ಮದಿ ಕೆಡಿಸಿದ್ದಾನೆ. ಎಲ್ಲೆಡೆ ಸೈಕೋ ಕಿಲ್ಲರ್ ಜೈಶಂಕರ್ ಕೊಲೆ, ಅತ್ಯಾಚಾರ ಮಾಡುತ್ತಿರುವ ವಿಷಯ ಚರ್ಚೆಗೆ ಗ್ರಾಸವಾಗಿದ್ದು, ವದಂತಿಗಳು ಸಹ ಪುಂಖಾನುಪುಂಖವಾಗಿ ಹರಡುತ್ತಿವೆ.
ಎಲ್ಲಿಯಾದರೂ ಗಡ್ಡಧಾರಿಗಳು, ದುಂಡನೆಯ ಮುಖ, ತಮಿಳು ಮಾತನಾಡುವವರು ಕಂಡುಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದು, ಪೊಲೀಸರಿಗೆ ಪ್ರತಿದಿನ ನೂರಾರು ಕರೆಗಳು ಬರುತ್ತಿವೆ. ಇದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಇದುವರೆಗೆ ನೂರು ಸಂಶಯಾಸ್ಪದ ಗಡ್ಡಧಾರಿ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.
ಪೊಲೀಸರು ಸಹ ಈಗ ಅಕ್ಷರಶಃ ನಿದ್ದೆಗಟ್ಟು ಕಾರ್ಯಾಚರಣೆಗೆ ಇಳಿದಿದ್ದರೂ ಸಫಲರಾಗಿಲ್ಲ. ತಮಿಳುನಾಡಿನ ಲಾರಿಗಳ ಮೂಲಕ ಈತ ಹೆಚ್ಚು ಪ್ರಯಾಣಿಸುತ್ತಾನೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಆ ರಾಜ್ಯದ ಲಾರಿಗಳ ಸಂಚಾರದ ಮೇಲೆ ಪೊಲೀಸರು ಹೆಚ್ಚು ನಿಗಾ ವಹಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾಗಳನ್ನು ಸಹ 10 ಗಂಟೆಗೆ ಮುಚ್ಚಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.