ADVERTISEMENT

ಎಲ್‌ಪಿಜಿ ಸಂಪರ್ಕ ರದ್ದು ಆದೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು: ವಾರಸುದಾರರಿಲ್ಲದ ರಾಜ್ಯದ 24.36 ಲಕ್ಷ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕಗಳನ್ನು ರದ್ದು ಮಾಡುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ರಮಕ್ಕೆ ಸಿಎಂ ಡಿ.ವಿ. ಸದಾನಂದ ಗೌಡ ಅವರು ತಡೆಯೊಡ್ಡಿದ್ದಾರೆ.

ಅಡುಗೆ ಅನಿಲವನ್ನು ರಿಯಾಯಿತಿ ದರದಲ್ಲಿ ಪೂರೈಸುತ್ತಿರುವುದು ಕೇಂದ್ರ ಸರ್ಕಾರ. ರಾಜ್ಯದ ಜನತೆಗೆ ದೊರೆಯುತ್ತಿರುವ ಈ ಸೌಲಭ್ಯವನ್ನು ಕಸಿದುಕೊಳ್ಳುವ ಅಗತ್ಯ ಏನಿದೆ ಎಂದು ಸೋಮವಾರ ರಾತ್ರಿ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಗೌಡ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಜಗದೀಶ ಶೆಟ್ಟರ್ ಅವರು ಇಲಾಖೆ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗೌಡರೂ ಇದನ್ನು ಬೆಂಬಲಿಸಿದರು. ವಾರಸುದಾರರಿಲ್ಲದ ಅನಿಲ ಸಂಪರ್ಕ ರದ್ದತಿ ಆದೇಶವನ್ನು ತಡೆಹಿಡಿಯುವಂತೆ ಅವರು ಇಲಾಖೆಗೆ ಸೂಚನೆ ನೀಡಿದರು. ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಅವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ: ವಾರಸುದಾರರಿಲ್ಲದ ಎಲ್‌ಪಿಜಿ ಸಂಪರ್ಕಗಳಿಗೆ ಕತ್ತರಿ ಹಾಕಲು ಮುಂದಾಗಿದ್ದ ಇಲಾಖೆ, ರಾಜ್ಯದಲ್ಲಿನ 24,36,751 ಸಂಪರ್ಕಗಳನ್ನು ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.

ಆರ್‌ಆರ್ ಸಂಖ್ಯೆ ಮತ್ತು ವಿಳಾಸದ ಪುರಾವೆ ನೀಡಿರುವ ಎಲ್‌ಪಿಜಿ ಗ್ರಾಹಕರ ಮೇಲೆ ಆದೇಶ ಯಾವುದೇ ಪರಿಣಾಮ ಬೀರದು. ಆದರೆ, ವಾರಸುದಾರರೇ ಇಲ್ಲದ ಎಲ್ಲ ಎಲ್‌ಪಿಜಿ ಸಂಪರ್ಕಗಳನ್ನು ರದ್ದುಗೊಳಿಸಬೇಕು ಎಂಬ ಆದೇಶ ಹೊರಡಿಸಲಾಗಿತ್ತು. ಇದೀಗ ಈ ಆದೇಶಕ್ಕೆ ಮುಖ್ಯಮಂತ್ರಿಗಳೇ ತಡೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.