ಬೆಂಗಳೂರು: ಕರ್ನಾಟಕ ನೀರಾವರಿ ನಿಗಮ ನಿ. (ಕೆಎನ್ಎನ್ಎಲ್) ಬಳ್ಳಾರಿ ಕಾರ್ಯಪಾಲಕ ಎಂಜಿನಿಯರ್ ಎಸ್. ಅಡಪ್ಪ ಒಳಗೊಂಡಂತೆ ನಾಲ್ವರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಈ ನಾಲ್ವರೂ ಅಧಿಕಾರಿಗಳು ಆದಾಯ ಮೀರಿ ಆಸ್ತಿ ಹೊಂದಿದ್ದಾರೆಂಬ ದೂರು ಆಧರಿಸಿ ದಾಳಿ ನಡೆಸಲಾಗಿದೆ. 11 ಸ್ಥಳಗಳ ಮೇಲೆ ದಾಳಿ ಆಗಿದ್ದು, ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಶೋಧಿಸುತ್ತಿದ್ದಾರೆ.
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಇಂಡಿ ಬಸ್ ಡಿಪೊ ಮ್ಯಾನೇಜರ್ ರಾಜಶೇಖರ ಸುರೇಶ ಗಜಕೋಶ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಗುಂಡ್ಲುಪೇಟೆಯ ಸಹಾಯಕ ಎಂಜಿನಿಯರ್ ಎನ್. ರವಿಕುಮಾರ್ ಹಾಗೂ ಕೋಲಾರ ಉಪ ನೋಂದಣಿ ಕಚೇರಿ ದ್ವಿತೀಯ ದರ್ಜೆ ಸಹಾಯಕ ಅಶ್ವತ್ಥಪ್ಪ ಎಚ್.ವೈ ದಾಳಿಗೆ ಒಳಗಾಗಿರುವ ಅಧಿಕಾರಿಗಳು.
ಅಡಪ್ಪ ಅವರ ಬಳ್ಳಾರಿ ಮನೆ– ಕಚೇರಿ, ರಾಜಶೇಖರ್ ಅವರ ವಿಜಯಪುರದಲ್ಲಿನ ಎರಡು ಮನೆ, ರವಿಕುಮಾರ್ ಅವರ ಗುಂಡ್ಲುಪೇಟೆ ಮತ್ತು ಮೈಸೂರು ಮನೆ, ಅಶ್ವತ್ಥಪ್ಪ ಅವರ ಕೋಲಾರದ ಮನೆಯನ್ನು ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದೆರಡು ದಿನಗಳಲ್ಲಿ ಶೋಧ ಕಾರ್ಯಾಚರಣೆ ಮುಗಿಸಿ ಅಧಿಕಾರಿಗಳ ಆಸ್ತಿ ವಿವರಗಳನ್ನು ಎಸಿಬಿ ಬಿಡುಗಡೆ ಮಾಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.