ಮಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು ಹೊರತಂದಿರುವ ಎಸ್.ವಿ.ಪರಮೇಶ್ವರ ಭಟ್ಟ ಅವರ ಸಮಗ್ರ ಸಂಪುಟಗಳನ್ನು ನಗರದ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು.
ಪರಮೇಶ್ವರ ಭಟ್ಟ ಅವರ ಕಾವ್ಯ, ಗದ್ಯ ಮತ್ತು ವಿಮರ್ಶೆಯ ಎಲ್ಲ ಬರಹಗಳನ್ನು ಏಳು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಮೂರು ಕಾವ್ಯ ಸಂಪುಟಗಳು, ತಲಾ ಎರಡು ಕಾವ್ಯ ಮತ್ತು ಕುವೆಂಪು ದರ್ಶನ ವಿಮರ್ಶಾ ಸಂಪುಟಗಳನ್ನು ಪ್ರಕಟಿಸಲಾಗಿದೆ.
ಒಟ್ಟು 4,498 ಪುಟಗಳ ಸಾಹಿತ್ಯ ಈ ಸಂಪುಟಗಳಲ್ಲಿದೆ. ಏಳು ಸಂಪುಟಗಳ ಒಟ್ಟು ಮುಖಬೆಲೆ ₹ 3,556 ಇದೆ. ಎಲ್ಲ ಸಮಯಗಳಲ್ಲೂ ಈ ಕೃತಿಗಳಿಗೆ ಶೇಕಡ 15ರಷ್ಟು ರಿಯಾಯ್ತಿ ನೀಡಲಾಗುತ್ತದೆ. ಆದರೆ, ಬೆಂಗಳೂರಿನಲ್ಲ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಖರೀದಿಸುವವರಿಗೆ ಶೇ 50ರ ರಿಯಾಯ್ತಿ ನೀಡಲಾಗುವುದು ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದರು.
ಕಾವ್ಯದ ತಲಾ ಒಂದು ಸಂಪುಟಕ್ಕೆ ಡಾ.ಸತ್ಯನಾರಾಯಣ ಮಲ್ಲಿಪಟ್ಣ, ನಾ.ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಗದ್ಯದ ತಲಾ ಒಂದು ಸಂಪುಟಕ್ಕೆ ಡಾ.ನರಸಿಂಹಮೂರ್ತಿ ಆರ್. ಮತ್ತು ಲಕ್ಷ್ಮಣ ಕೊಡಸೆ ಹಾಗೂ ವಿಮರ್ಶೆಯ ತಲಾ ಒಂದು ಸಂಪುಟಕ್ಕೆ ಡಾ.ಎ.ವಿ.ನಾವುಡ, ಶಿವಾಜಿ ಜೋಯಿಸ್ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.