ಬೆಂಗಳೂರು: `ಸಕಾಲ' ಯೋಜನೆಯಡಿ ಗುರುತಿಸಲ್ಪಟ್ಟ ರಾಜ್ಯ ಪೊಲೀಸ್ ಇಲಾಖೆಯ ಸೇವೆಗಳ ಸ್ಥಿತಿಗತಿಯನ್ನು ನಾಗರಿಕರಿಗೆ ತ್ವರಿತವಾಗಿ ತಿಳಿಸುವ ನಿಟ್ಟಿನಲ್ಲಿ ರೂಪಿಸಿರುವ `ಎಸ್ಎಂಎಸ್-ಗೇಟ್ವೇ' (ಮೊಬೈಲ್ ಮೂಲಕ ಕಿರು ಸಂದೇಶ ರವಾನೆ) ಯೋಜನೆಗೆ ಉಪಮುಖ್ಯಮಂತ್ರಿ ಆರ್.ಅಶೋಕ ನಗರದಲ್ಲಿ ಮಂಗಳವಾರ ಚಾಲನೆ ನೀಡಿದರು.
ದೇಶದ ಪೊಲೀಸ್ ವ್ಯವಸ್ಥೆಯಲ್ಲೇ ಪ್ರಥಮ ಎನಿಸಿರುವ ಈ ಯೋಜನೆಗೆ ನಗರದ ನೃಪತುಂಗ ರಸ್ತೆಯಲ್ಲಿನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಾಲನೆ ಸಿಕ್ಕಿದ ಕೆಲ ನಿಮಿಷಗಳಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೊಬೈಲ್ಗಳಿಗೆ ಪ್ರಾಯೋಗಿಕವಾಗಿ ಎಸ್ಎಂಎಸ್ ರವಾನೆಯಾಯಿತು.
`ಸುಮಾರು 53 ಕೋಟಿ ರೂಪಾಯಿ ವೆಚ್ಚದಲ್ಲಿ ಅಪರಾಧ ಮತ್ತು ಅಪರಾಧಿಗಳ ಕಣ್ಗಾವಲು ಜಾಲ ವ್ಯವಸ್ಥೆ (ಸಿಸಿಟಿಎನ್ಎಸ್) ರೂಪಿಸಲಾಗಿದೆ. ಈ ಯೋಜನೆಯಡಿ ಎಸ್ಎಂಎಸ್-ಗೇಟ್ವೇಯಂಥ ಹಲವು ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ' ಎಂದು ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್ ಹೇಳಿದರು.
ರಾಜ್ಯದ ಎಲ್ಲಾ ಠಾಣೆಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿಗಳು ಅಂತರ್ಜಾಲದ ಮೂಲಕ ಸಿಸಿಟಿಎನ್ಎಸ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿವೆ. ಇದರಿಂದಾಗಿ ಠಾಣೆಯಲ್ಲಿ ನಿತ್ಯ ದಾಖಲಾಗುವ ದೂರುಗಳು ಹಾಗೂ ತನಿಖಾ ಪ್ರಗತಿ ಕುರಿತ ಮಾಹಿತಿ, ಬೆಂಗಳೂರಿನ ಮಡಿವಾಳದಲ್ಲಿರುವ ರಾಜ್ಯ ಪೊಲೀಸ್ ಮಾಹಿತಿ ಸಂಗ್ರಹ ಕೇಂದ್ರದಲ್ಲಿ (ಕೆಪಿಡಿಸಿ) ನಿಯಮಿತವಾಗಿ ದಾಖಲಾಗುತ್ತಿರುತ್ತದೆ. ದೇಶದಲ್ಲಿ ರಾಜ್ಯ ಪೊಲೀಸ್ ಇಲಾಖೆ ಮಾತ್ರ ಈ ರೀತಿಯ ವ್ಯವಸ್ಥೆ ಹೊಂದಿದೆ ಎಂದರು.
ಯೋಜನೆಯ ಅನುಕೂಲ: `ಸಕಾಲ' ಯೋಜನೆಯಡಿ ಪೊಲೀಸ್ ಇಲಾಖೆಯ 21 ಸೇವೆಗಳ ಬಗ್ಗೆ ಅರ್ಜಿ ಸಲ್ಲಿಸಿದ ಅಥವಾ ದೂರು ದಾಖಲಿಸಿದ ಹಂತದಿಂದ ಹಿಡಿದು ಆರೋಪಪಟ್ಟಿ ಸಲ್ಲಿಕೆ ವರೆಗೆ ಅರ್ಜಿದಾರರ ಮೊಬೈಲ್ಗೆ ನಿಯಮಿತವಾಗಿ ಸಂದೇಶ ರವಾನೆಯಾಗುತ್ತದೆ. ಇದರಿಂದಾಗಿ ದೂರುದಾರರು, ಅರ್ಜಿ ಅಥವಾ ದೂರಿನ ಪ್ರಗತಿಯ ಮಾಹಿತಿ ಬಯಸಿ ಠಾಣೆಗೆ ಬರುವ ತೊಂದರೆ ತಪ್ಪುತ್ತದೆ. ರಾಜ್ಯ ಪೊಲೀಸ್ ಇಲಾಖೆಯ ಡಿಡಿಡಿ..ಜಟ.ಜ್ಞಿ ವೆಬ್ಸೈಟ್ ವಿಳಾಸದಿಂದ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಕಾರ್ಯ ನಿರ್ವಹಣೆ ಹೇಗೆ?
ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಮನವಿ ಅಥವಾ ದೂರು ಸಲ್ಲಿಸಿದ ಕೂಡಲೇ ಅವರಿಗೆ 15 ಅಂಕೆಗಳ ನಾಗರಿಕ ಸೇವಾ ಖಾತ್ರಿ (ಜಿಎಸ್ಸಿ) ಸಂಖ್ಯೆ ನೀಡಲಾಗುತ್ತದೆ. ಜಿಎಸ್ಸಿ ಸಂಖ್ಯೆ, ದೂರು ದಾಖಲಾದ ಠಾಣೆ ಮತ್ತಿತರ ವಿವರ ಒಳಗೊಂಡ ಸಂದೇಶವನ್ನೂ ದೂರುದಾರರ ಮೊಬೈಲ್ಗೆ ಕಳುಹಿಸಲಾಗುತ್ತದೆ. ಆ ನಂತರ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲು, ದೋಷಾರೋಪಣಾ ಪಟ್ಟಿ ಸಲ್ಲಿಕೆ, ಸೇವೆಯ ಮುಕ್ತಾಯ ಹೀಗೆ ಪ್ರತಿ ಹಂತದಲ್ಲೂ ಅರ್ಜಿದಾರರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.