ನವದೆಹಲಿ: ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸುತ್ತಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ತಾನು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಏಪ್ರಿಲ್ 9ರೊಳಗೆ ಉತ್ತರಿಸುವಂತೆ ಮಾಜಿ ಮುಖ್ಯಮಂತ್ರಿ, ಬಿ. ಎಸ್. ಯಡಿಯೂರಪ್ಪ, `ಅದಾನಿ ಎಂಟರ್ಪ್ರೈಸಸ್~ ಹಾಗೂ `ಜೆಎಸ್ಡಬ್ಲ್ಯು~ ಕಂಪೆನಿಗಳಿಗೆ ಸೂಚಿಸಿದೆ.
ಪ್ರತಿಷ್ಠಿತ ಗಣಿ ಕಂಪೆನಿಗಳಿಂದ `ದೇಣಿಗೆ~ ಪಡೆದ ಆರೋಪಕ್ಕೊಳಗಾಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ತನಿಖೆ ಅಗತ್ಯವಿದೆಯೇ ಎಂದು ಪರಿಶೀಲಿಸುತ್ತಿರುವ ಪಿ.ವಿ. ಜಯಕೃಷ್ಣನ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ ಏಪ್ರಿಲ್ 20ರೊಳಗೆ ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ಗೆ ತನ್ನ ವರದಿ ಸಲ್ಲಿಸಲಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಧಾರವಾಡ ಮೂಲದ `ಸಮಾಜ ಪರಿವರ್ತನಾ ಸಮುದಾಯ~ (ಎಸ್ಪಿಎಸ್) ಯಡಿಯೂರಪ್ಪನವರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಎಸ್ಪಿಎಸ್ ಆರೋಪ ಕುರಿತು ಪರಿಶೀಲಿಸುತ್ತಿರುವ ಉನ್ನತಾಧಿಕಾರ ಸಮಿತಿ ಮುಂದೆ ಮಂಗಳವಾರ ಎಸ್.ಎಸ್. ಹಿರೇಮಠ, ಬೇಲಿಕೇರಿ ಬಂದರಿನಿಂದ 5.5ಲಕ್ಷ ಟನ್ ಅದಿರು ಕಳವು ಮಾಡಿದ ಆರೋಪ ಎದುರಿಸುತ್ತಿರುವ `ಅದಾನಿ ಎಂಟರ್ಪ್ರೈಸಸ್~ ಹಾಗೂ ಮಾಜಿ ಮುಖ್ಯಮಂತ್ರಿ ಕುಟುಂಬಕ್ಕೆ `ದೇಣಿಗೆ~ ನೀಡಿದ ಆರೋಪ ಹೊತ್ತಿರುವ ಜೆಎಸ್ಡಬ್ಲ್ಯು ಗಣಿ ಕಂಪೆನಿಗಳ ವಕೀಲರು ಹಾಜರಾಗಿದ್ದರು.
ಎಫ್ಐಆರ್ ರದ್ದು: ಮೇಲ್ಮನವಿ
ನವದೆಹಲಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಎಫ್ಐಆರ್ನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಎರಡು ಕಂಪೆನಿಗಳಿಗೆ ಗಣಿಗಾರಿಕೆ ಲೈಸೆನ್ಸ್ ನೀಡುವಾಗ ಭ್ರಷ್ಟಾಚಾರವೆಸಗಲಾಗಿದೆ ಎಂಬ ಲೋಕಾಯುಕ್ತ ವರದಿಯನ್ನು ಆಧರಿಸಿ ರಾಜ್ಯಪಾಲರು ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದರು.
ವಕೀಲ ಸಿರಾಜುದ್ದೀನ್ ಪಾಷಾ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಿಸಿದ್ದರು. ಹೈಕೋರ್ಟ್ ಈ ಎಫ್ಐಆರ್ನ್ನು ರದ್ದುಪಡಿಸಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಈಗ ಪಾಷಾ ಅವರು ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.