ಬೆಂಗಳೂರು: ‘ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದೊಳಗೇ ಅಂತಿಮ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಅಂತಹ ಪ್ರಕ್ರಿಯೆ ಕಾನೂನು ಬಾಹಿರವಾಗುತ್ತದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
‘ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಗ್ರಾಮದ ಎರಡು ಪ್ರತ್ಯೆಕ ಸರ್ವೇ ನಂಬರ್ಗಳ ಒಟ್ಟು 38 ಎಕರೆ 4 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು’ ಎಂಬ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದೆ.
‘ಉದ್ದೇಶಿತ ಅಂತಿಮ ಅಧಿಸೂಚನೆ ಒಂದು ವರ್ಷದ ಅವಧಿಯ ಒಳಗೇ ಇರಬೇಕು. ಇಲ್ಲದಿದ್ದರೆ ಅದು ಭೂ ಸ್ವಾಧೀನ ಕಾಯ್ದೆ–1894ರ ಕಲಂ 4 (1) ಮತ್ತು ಕಲಂ 6 (1)ರ ನಡುವಿನ ವಿವರಣೆಗೆ ವಿರುದ್ಧವಾಗುತ್ತದೆ. ಒಂದು ವೇಳೆ ಅವಧಿ ಮೀರಿದರೆ ಅದನ್ನು ಜಮೀನಿನ ಮಾಲೀಕರಿಗೆ ಬಿಟ್ಟುಕೊಡಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಉದ್ದೇಶಿತ ಮತ್ತು ಅಂತಿಮ ಅಧಿಸೂಚನೆಯ ಅವಧಿ 1986ಕ್ಕಿಂತ ಮೊದಲು ಮೂರು ವರ್ಷಗಳ ಕಾಲ ಇತ್ತು. 1986ರಲ್ಲಿ ಇದಕ್ಕೆ ತಿದ್ದುಪಡಿ ತರುವ ಮೂಲಕ ಇದನ್ನು ಒಂದು ವರ್ಷದ ಅವಧಿಗೆ ಸೀಮಿತಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.