ಬೆಂಗಳೂರು: ‘ನನ್ನ ವಿರುದ್ಧ ಷಡ್ಯಂತ್ರ ನಡೆಸಿರುವ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್, ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ಮತ್ತು ಹೈಗ್ರೌಂಡ್ಸ್ ಠಾಣೆಯ ಎಸ್ಐ ಎಂ.ಎಸ್.ರವಿ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆ–1989ರ (ಜಾತಿನಿಂದನೆ) ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಐಪಿಎಸ್ ಅಧಿಕಾರಿ ಡಾ.ಪಿ.ರವೀಂದ್ರನಾಥ್ ಅವರು ಕಬ್ಬನ್ ಪಾರ್ಕ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
‘ಹೋಟೆಲ್ನಲ್ಲಿ ಮೊಬೈಲ್ನಿಂದ ಯುವತಿಯ ಆಕ್ಷೇಪಾರ್ಹ ಛಾಯಾಚಿತ್ರ ತೆಗೆದ ಆರೋಪದ ಮೇಲೆ ನನ್ನ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಮೇ 28ರಂದು ಐಪಿಸಿ 354 ಮತ್ತು 506 ಅಡಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿರುವುದರಿಂದ ನನ್ನನ್ನು ಬಂಧಿಸಿ, ವಿಚಾರಣೆ ನಡೆಸುವಂತೆ ಮೇ 28ರಂದು ಔರಾದಕರ್ ಅವರ ಕಚೇರಿಗೆ ಹೋದ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಅಸ್ಪೃಶ್ಯನಂತೆ ನಡೆಸಿಕೊಂಡರು’ ಎಂದು ದೂರಿದ್ದಾರೆ.
‘ನನ್ನನ್ನು ಬಂಧಿಸಲು ಹೈಗ್ರೌಂಡ್ಸ್ ಠಾಣೆಯ ಸಿಬ್ಬಂದಿಗೆ ನಿರ್ದೇಶನ ನೀಡಿ ಅಥವಾ ನೀವೇ ಬಂಧಿಸಿ ಎಂದು ಔರಾದಕರ್ ಅವರಿಗೆ ಹೇಳಿದೆ. ಆಗ ‘ನಾನು ತನಿಖಾಧಿಕಾರಿಯಲ್ಲ. ಈ ವಿಷಯವಾಗಿ ಪೊಲೀಸ್ ಮಹಾ ನಿರ್ದೇಶಕರ ಬಳಿ ಹೋಗೋಣ’ ಎಂದು ಔರಾದಕರ್ ಹೇಳಿದರು. ಆಗ ನಾನು ನಿಮ್ಮೊಂದಿಗೆ ಬರುತ್ತೇನೆ ಎಂದೆ. ಇದಕ್ಕೆ ಅವರು, ‘ನನ್ನನ್ನು ಮುಟ್ಟಬೇಡಿ, ನನ್ನ ಕಾರಿನಲ್ಲಿ ಕೂರಬೇಡಿ. ಇದು ನನ್ನ ಕಾರು’ ಎಂದು ಹೇಳಿ ಕಾರಿನಲ್ಲಿ ಹೊರಟರು. ಡಿಜಿಪಿ ಕಚೇರಿಯ ಲಿಫ್ಟ್ನಲ್ಲೂ ಅವರು ಇದೇ ರೀತಿ ನಡೆದುಕೊಂಡರು’ ಎಂದು ದೂರಿನಲ್ಲಿ ಹೇಳಿದ್ದಾರೆ.
‘ಘಟನೆ ನಡೆದ ದಿನ (ಮೇ 26) ಯುವತಿ ದೂರು ನೀಡಲು ತಯಾರಿರಲಿಲ್ಲ. ಆದರೆ, ಎಸ್ಐ ರವಿ ಮತ್ತು ರವಿಕಾಂತೇಗೌಡ ಬಲವಂತವಾಗಿ ಯುವತಿಯಿಂದ ದೂರು ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ರವೀಂದ್ರನಾಥ್ ಅವರು ಸಂಜೆ 6 ಗಂಟೆ ಸುಮಾರಿಗೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಈವರೆಗೆ ಪ್ರಕರಣ ದಾಖಲಾಗಿಲ್ಲ. ದೂರನ್ನು ಮಾತ್ರ ಸ್ವೀಕರಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.
ಗೃಹ ಸಚಿವರಿಗೆ ಸಿ.ಎಂ ಸೂಚನೆ
ಬೆಂಗಳೂರು: ಪರಸ್ಪರ ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿರುವ ಐಪಿಎಸ್ ಅಧಿಕಾರಿಗಳಾದ ಡಾ.ರವೀಂದ್ರನಾಥ್ ಮತ್ತು ರಾಘವೇಂದ್ರ ಔರಾದಕರ್ ಅವರನ್ನು ಕರೆಸಿ ಮಾತುಕತೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸೂಚಿಸಿದ್ದಾರೆ.
ರವೀಂದ್ರನಾಥ್ ಅವರು ತಮ್ಮ ಮೊಬೈಲ್ನಲ್ಲಿ ಯುವತಿಯ ಭಾವಚಿತ್ರ ತೆಗೆದಿದ್ದಾರೆ ಎನ್ನಲಾದ ಪ್ರಕರಣ ಮತ್ತು ಅದರ ನಂತರದ ಎಲ್ಲ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಮಾಹಿತಿ ಪಡೆದರು.
ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಡಿಜಿಪಿ ಲಾಲ್ ರೋಕುಮಾ ಪಚಾವೊ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
ಸಣ್ಣ ಪ್ರಕರಣವನ್ನು ದೊಡ್ಡದು ಮಾಡಿರುವುದು ಸರಿಯಲ್ಲ. ಇಬ್ಬರೂ ಅಧಿಕಾರಿಗಳನ್ನು ಕರೆಸಿ, ವಿವಾದ ಬಗೆಹರಿಸಿ ಎಂದು ಮುಖ್ಯಮಂತ್ರಿಯವರು ಗೃಹ ಸಚಿವರಿಗೆ ಸೂಚಿಸಿದರು ಎನ್ನಲಾಗಿದೆ.
ಈ ಪ್ರಕರಣ ಇಷ್ಟೊಂದು ದೊಡ್ಡದಾಗಲು ಕಾರಣ ಏನು? ರಾಘವೇಂದ್ರ ಔರಾದಕರ್ ವಿರುದ್ಧ ರವೀಂದ್ರನಾಥ್ ದೂರುತ್ತಿರುವುದು ಏಕೆ? ಕೆಎಸ್ಆರ್ಪಿ ಸಿಬ್ಬಂದಿ ಧರಣಿ ನಡೆಸಲು ಕುಮ್ಮಕ್ಕು ನೀಡಿದ್ದು ಯಾರು? ಇತ್ಯಾದಿ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಪಡೆದರು ಎಂದು ಗೊತ್ತಾಗಿದೆ.ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಾರ್ಜ್ ಅವರು ‘ಬೆಂಗಳೂರು ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಅವರನ್ನು ವರ್ಗಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಸ್ಪಪ್ಟಪಡಿಸಿದರು.
ಪ್ರಕರಣ ಕುರಿತು ಸಿಐಡಿ ತನಿಖೆಗೆ ಆದೇಶ ನೀಡಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೂ ಶಾಂತ ರೀತಿಯಲ್ಲಿ ಇರುವಂತೆ ಕೆಎಸ್ಆರ್ಪಿ ಸಿಬ್ಬಂದಿಯಲ್ಲೂ ಅವರು ಮನವಿ ಮಾಡಿದರು.
ಜಿಲ್ಲೆಗಳಲ್ಲಿ ಪ್ರತಿಭಟನೆ
ಡಾ. ಪಿ. ರವೀಂದ್ರನಾಥ್ ಅವರ ವರ್ಗಾವಣೆ ಕೈಬಿಡುವಂತೆ ಒತ್ತಾಯಿಸಿ ದಾವಣಗೆರೆ, ಚಿತ್ರದುರ್ಗ, ಮೈಸೂರು ಮತ್ತು ಹಾಸನದಲ್ಲಿ ಕೆಎಸ್ಆರ್ಪಿ ಸಿಬ್ಬಂದಿ ಗುರುವಾರ ಬೀದಿಗೆ ಇಳಿದರು.ಪೊಲೀಸ್ ಅಧಿಕಾರಿಯ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದವು.
ಹೆದ್ದಾರಿ ತಡೆ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿ ಭಾರತೀಯ ಮೀಸಲು ಪಡೆ (ಐಆರ್ಬಿ) ಸಿಬ್ಬಂದಿ ಮತ್ತು ಅವರ ಪರಿವಾರದವರು ಗುರುವಾರ ಒಂದು ತಾಸು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದು.
ಜಾರ್ಜ್ಗೆ ತಾಕತ್ತಿಲ್ಲ
ಪರಸ್ಪರ ಕಿತ್ತಾಡುತ್ತಿರುವ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಿಸಲು ಗೃಹ ಸಚಿವರಿಗೆ ಸಾಧ್ಯವಾಗಿಲ್ಲ. ಇನ್ನು ಇಡೀ ಇಲಾಖೆಯನ್ನು ಇವರು ಹೇಗೆ ನಿಯಂತ್ರಿಸುತ್ತಾರೆ?
– ಬಿಜೆಪಿ ವಕ್ತಾರ ಸಿ.ಟಿ. ರವಿ
ರವೀಂದ್ರನಾಥ್ಗೆ ನೋಟಿಸ್?
ಸೇವಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎಡಿಜಿಪಿ ಡಾ.ರವೀಂದ್ರನಾಥ್ ಅವರಿಗೆ ಷೋಕಾಸ್ ನೋಟಿಸ್ ನೀಡಲು ಪೊಲೀಸ್ ಮಹಾನಿರ್ದೇಶಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ರವೀಂದ್ರನಾಥ್ ಅವರು ಟಿ.ವಿ. ವಾಹಿನಿಗಳಲ್ಲಿ ಕುಳಿತು ಚರ್ಚೆಯಲ್ಲಿ ಭಾಗವಹಿಸುವುದರ ಮೂಲಕ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಾಗೆಯೇ ಕೆಎಸ್ಆರ್ಪಿ ಸಿಬ್ಬಂದಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಆರೋಪ ಕೂಡ ಅವರ ಮೇಲೆ ಇದ್ದು, ಈ ಸಂಬಂಧ ಕಾರಣ ಕೇಳಿ ನೋಟಿಸ್ ನೀಡಲು ತಯಾರಿ ನಡೆಸಲಾಗಿದೆ. ಆದರೆ ವಿವಾದ ತಣ್ಣಗಾದ ನಂತರ ನೋಟಿಸ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಜಾರ್ಜ್ ಅಸಮರ್ಥ: ಜೋಶಿ
ಕಾನೂನು–ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ದುರದೃಷ್ಟಕರ. ಗೃಹ ಸಚಿವ ಖಾತೆ ನಿಭಾಯಿಸಲು ಕೆ.ಜೆ.ಜಾರ್ಜ್ ಅಸಮರ್ಥ
-ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಜಾರ್ಜ್ ಖಾತೆ ಬದಲಿಸಿ: ಬಿಜೆಪಿ
ಬೆಂಗಳೂರು: ಸರ್ಕಾರದ ಬೇಜವಾಬ್ದಾರಿಯಿಂದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ನಡುವಣ ಸಂಘರ್ಷ ತಾರಕಕ್ಕೇರಿದ್ದು, ಈ ಪ್ರಕರಣವನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಖಾತೆಯನ್ನು ಬದಲಾಯಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಎಡಿಜಿಪಿ ಡಾ.ಪಿ. ರವೀಂದ್ರನಾಥ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಅವರ ನಡುವೆ ನಡೆಯುತ್ತಿರುವ ಕಿತ್ತಾಟ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ವರ್ತಿಸಿದ್ದಾರೆ. ಈ ಪ್ರಕರಣವನ್ನು ಬೀದಿರಂಪ ಮಾಡಿರುವುದು ನಾಚಿಕೆಗೇಡು ಎಂದು ಬಿಜೆಪಿ ವಕ್ತಾರ, ಶಾಸಕ ಸಿ.ಟಿ. ರವಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಅವರೇ ಹೇಳಿದಂತೆ ಮೀಸಲಾತಿ ಕೋಟಾದಲ್ಲಿ ಗೃಹ ಇಲಾಖೆಯನ್ನು ಜಾರ್ಜ್ ಅವರಿಗೆ ನೀಡಿರುವುದರಿಂದ ಅವರನ್ನು ಮುಟ್ಟುವ ಧೈರ್ಯ ಇಲ್ಲ. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡುವ ಶಕ್ತಿ ಮುಖ್ಯಮಂತ್ರಿ ಅವರಿಗೇ ಇಲ್ಲ. ಆದ್ದರಿಂದ, ಕೊನೆಪಕ್ಷ ಗೃಹ ಖಾತೆಯನ್ನು ದಕ್ಷ ವ್ಯಕ್ತಿಯೊಬ್ಬರಿಗೆ ವಹಿಸಬೇಕು ಮತ್ತು ಪ್ರಕರಣದ ಸತ್ಯಾಸತ್ಯತೆಯನ್ನು ಒಂದು ತಿಂಗಳ ಒಳಗೆ ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದಿಂದ ಪೊಲೀಸ್ ಇಲಾಖೆಯ ಘನತೆ, ಗೌರವ ಬೀದಿಯಲ್ಲಿ ಹರಾಜಾಗಿದೆ. ಶಿಸ್ತಿನ ಇಲಾಖೆ ಇಂದು ನಗೆಪಾಟಲಿಗೀಡಾಗಿದೆ ಎಂದರು.
ನ್ಯಾಯಾಂಗ ತನಿಖೆಗೆ ಆಗ್ರಹ: ವಿಜಾಪುರದಲ್ಲಿ ಇತ್ತೀಚೆಗೆ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಘಟನೆ ಕುರಿತು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ರಾಜಕೀಯ ಕಾರಣಕ್ಕಾಗಿ ಪೊಲೀಸರು ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕೇವಲ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ಬಂಧಿಸಲಾಗುತ್ತಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.